ಯಾದಗಿರಿ: ಹಬ್ಬಗಳ ಸೀಸನ್ ಮುಗಿಯುತ್ತಿದ್ದಂತೆಯೇ ತರಕಾರಿ ದರಗಳ ಬೆಲೆಯೂ ಇಳಿಕೆಯಾಗಿದೆ.ಹಲವಾರು ತರಕಾರಿ ದರಗಳು ಗಣನೀಯವಾಗಿ ಇಳಿಕೆಯಾಗಿದ್ದು, ಗ್ರಾಹಕರು ನಿಟ್ಟಿಸಿರು ಬಿಡುವಂತಾಗಿದೆ.
ದಸರಾ, ದೀಪಾವಳಿ ಹಬ್ಬದ ವೇಳೆ ತರಕಾರಿ ಬೆಲೆ ಗಗನಕ್ಕೇರಿತ್ತು. ದರ ಹೆಚ್ಚಾಗಿದ್ದರೂ ಗ್ರಾಹಕರು ವಿಧಿಯಿಲ್ಲದೆ ತರಕಾರಿ ಖರೀದಿ ಮಾಡುತ್ತಿದ್ದರು. ಈಗ ಹಲವು ತರಕಾರಿಗಳು ಕಡಿಮೆ ಬೆಲೆಗೆ ಸಿಗುತ್ತಿವೆ.
ನಗರದ ಮಹಾತ್ಮ ಗಾಂಧಿ ಮಾರುಕಟ್ಟೆ, ರೈಲ್ವೆ ಸ್ಟೇಷನ್ ರಸ್ತೆಯ ತರಕಾರಿ ಮಾರುಕಟ್ಟೆಯಲ್ಲಿ ಜನಸಂದಣಿ ಕಡಿಮೆಯಾಗಿದೆ. ಹಬ್ಬದ ಸಂದರ್ಭದಲ್ಲಿ ತರಕಾರಿ ಮಾರುಕಟ್ಟೆಗಳು ಜನದಟ್ಟಣೆಯಿಂದ ಕೂಡಿದ್ದವು. ಈಗ ವ್ಯಾಪಾರವೂ ಅಷ್ಟಕಷ್ಟೆ ಆಗುತ್ತಿದೆ ಎಂದು ವ್ಯಾಪಾರಿಗಳು ಹೇಳುವ ಮಾತಾಗಿದೆ.
ತರಕಾರಿ ದರ ಇಳಿಕೆ: ಟೊಮೆಟೊ ಕೆಜಿಗೆ ಕಳೆದ ವಾರಕ್ಕಿಂತ ₹10 ಇಳಿಕೆಯಾಗಿದೆ. ಈಗ ₹20 ಕೆಜಿಗೆ ಮಾರಾಟವಾಗುತ್ತಿದೆ. ಬದನೆಕಾಯಿ ಕಳೆದ ವಾರ ₹120 ಇದ್ದಿದ್ದು, ಈ ವಾರ ₹80 ಕೆಜಿ ದರ ಇದೆ. ಬೆಂಡೆಕಾಯಿ ಕಳೆದ ವಾರ ₹80 ಕೆಜಿ ಇತ್ತು. ಈ ವಾರ ₹40 ಕೆಜಿ ಇದ್ದು, ಕೆಜಿಗೆ ₹40 ಇಳಿಕೆಯಾಗಿದೆ.
ಆಲೂಗಡ್ಡೆ ಕಳೆದ ವಾರ ₹60 ಕೆಜಿಯಿಂದ ₹50ಕ್ಕೆ ಇಳಿಕೆಯಾಗಿದೆ. ಸೌತೆಕಾಯಿ ದರವೂ ಕಳೆದ ವಾರಕ್ಕಿಂದ ₹30 ಇಳಿಕೆಯಾಗಿ ₹50, ಗೋಬಿ ₹20 ದರ ಕಡಿಮೆಯಾಗಿ ₹60, ಕ್ಯಾಬೇಜ್ ದರವೂ ₹40 ಕೆಜಿಗೆ ಮಾರಾಟವಾಗುತ್ತಿದೆ.
ಬೀನ್ಸ್, ಮೂಲಂಗಿ, ಹಾಗಲಕಾಯಿ ಬೆಲೆಯೂ ಕಳೆದ ವಾರಕ್ಕಿಂತ ₹20 ಕಡಿಮೆಯಾಗಿದೆ. ಹೀರೆಕಾಯಿ ₹40 ಕಡಿಮೆಯಾಗಿ ಈಗ ₹80 ಕೆಜಿ ಮಾರಾಟವಾಗುತ್ತಿದೆ. ಹಸಿ ಶುಂಠಿ ಕೆಜಿಗೆ ₹80 ಇದೆ. ಅವರೆಕಾಯಿ ಕೆಜಿಗೆ ₹80 ದರವಿದೆ.
ದರ ಸ್ಥಿರ: ಈರುಳ್ಳಿ, ದೊಣ್ಣೆಮೆಣಸಿನಕಾಯಿ, ಗಜ್ಜರಿ, ಚವಳೆಕಾಯಿ, ಸೋರೆಕಾಯಿ, ಬಿಟ್ ರೂಟ್, ತೊಂಡೆಕಾಯಿ ಯಥಾರೀತಿ ದರ ಇದೆ.
ಸೊಪ್ಪುಗಳ ಬೆಲೆಯೂ ಇಳಿಕೆ: ತರಕಾರಿ ದರ ಇಳಿದಂತೆ ಸೊಪ್ಪುಗಳ ಬೆಲೆಯೂ ಇಳಿಕೆಯಾಗಿದೆ. ಅಗ್ಗದ ದರದಲ್ಲಿ ಸೊಪ್ಪುಗಳು ಗ್ರಾಹಕರಿಗೆ ಸಿಗುತ್ತಿವೆ.ಕೋತಂಬರಿ ಸೊಪ್ಪು ಒಂದು ಕಟ್ಟು ₹20 ದರ ಇದ್ದು, ಪುದೀನಾ ಒಂದು ಕಟ್ಟು ₹20ರಿಂದ ₹25 ಒಂದು ಕಟ್ಟು ಲಭಿಸುತ್ತಿದೆ.ಮೆಂತ್ಯೆ ಸೊಪ್ಪು ಒಂದು ಕಟ್ಟು ₹10 ಇದ್ದರೆ ₹20ಗೆ ಮೂರು ಕಟ್ಟು ಸಿಗುತ್ತಿದೆ. ಇದೇ ರೀತಿ ಪುಂಡಿಪಲ್ಯೆ, ಸಬ್ಬಸಗಿ, ಪಾಲಕ, ರಾಜಗಿರಿ ಸೊಪ್ಪು ಮಾರಾಟವಾಗುತ್ತಿದೆ.