ಯಾದಗಿರಿ: ನಗರದ ಮಹಾತ್ಮಗಾಂಧಿ ತರಕಾರಿ ಮಾರುಕಟ್ಟೆಯಲ್ಲಿ ಈರುಳ್ಳಿ, ಗೋಬಿ, ಕ್ಯಾಬೇಜ್, ಚವಳೆಕಾಯಿ ಬೆಲೆ ಏರಿಕೆಯಾಗಿದ್ದು, ಇನ್ನುಳಿದ ತರಕಾರಿ, ಸೊಪ್ಪುಗಳ ಬೆಲೆ ಯಥಾಸ್ಥಿತಿಯಲ್ಲಿದೆ.
ಕಳೆದ ವಾರ ತರಕಾರಿ ದರದಲ್ಲಿ ಭಾರಿ ಇಳಿಕೆಯಾಗಿತ್ತು. ಈ ಬಾರಿ ಅದೇ ದರ ಸ್ಥಿರವಾಗಿದ್ದು, ಗ್ರಾಹಕರು ಖುಷಿ ಆಗುವಂತೆ ಆಗಿದೆ. ದಸರಾದಿಂದ ದೀಪಾವಳಿ ಹಬ್ಬ ಮುಗಿಯುವವರೆಗೂ ತರಕಾರಿ ಬೆಲೆ ಏರಿಕೆಯಾಗುತ್ತಲೇ ಇತ್ತು. ಕಳೆದ ಎರಡು ವಾರದಿಂದ ತರಕಾರಿ ದರ ಇಳಿಕೆಯಾಗಿರುವುದು ಗ್ರಾಹಕರಿಗೆ ಹೊರೆ ಕಡಿಮೆಯಾದಂತೆ ಆಗಿದೆ.
ಕೆಲ ತರಕಾರಿ ದರ ಏರಿಕೆ: ಟೊಮೆಟೊ, ಹೂಕೋಸು, ಎಲೆಕೋಸು, ಚವಳೆಕಾಯಿ, ಬೀಟ್ರೂಟ್, ಬೆಂಡೆಕಾಯಿ ಬೆಲೆ ಕಳೆದ ವಾರಕ್ಕಿಂತ ಹೆಚ್ಚಳವಾಗಿದೆ. ಟೊಮೆಟೊ ಕಳೆದ ವಾರಕ್ಕಿಂತ ₹10 ಹೆಚ್ಚಳವಾಗಿದೆ. ಬೆಂಡೆಕಾಯಿ ₹20 ಹೆಚ್ಚಳವಾಗಿ ₹60ಕ್ಕೆ ಕೆ.ಜಿ ಮಾರಾಟವಾಗುತ್ತಿದೆ.
ಗೋಬಿ ಕಳೆದ ವಾರ ₹60 ಇತ್ತು. ಈ ವಾರ ₹80 ಕೆ.ಜಿ ಆಗಿದೆ. ಬೀಟ್ ರೂಟ್ ಕೂಡ ಕೆ.ಜಿಗೆ ₹ 80 ಆಗಿದೆ. ಚವಳೆಕಾಯಿ ₹80ಗೆ ಕೆ.ಜಿ ಇದೆ.
ಯಥಾಸ್ಥಿತಿ ದರ: ಬದನೆಕಾಯಿ, ಆಲೂಗಡ್ಡೆ, ಬೀನ್ಸ್, ಗಜ್ಜರಿ, ಸವತೆಕಾಯಿ, ಮೂಲಂಗಿ, ಮೆಣಸಿನಕಾಯಿ, ಸೋರೆಕಾಯಿ, ಹೀರೆಕಾಯಿ, ಹಾಗಲಕಾಯಿ ಕಳೆದ ವಾರದಂತೆ ಈ ವಾರ ದರದಲ್ಲಿ ಸ್ಥಿರವಾಗಿದೆ. ದೊಣ್ಣೆಮೆಣಸಿನಕಾಯಿ, ಈರುಳ್ಳಿ ದರ ಕಳೆದ ವಾರಕ್ಕಿಂತ ಇಳಿಕೆಯಾಗಿದೆ.
ಸೊಪ್ಪುಗಳು ಅಗ್ಗ: ಸೊಪ್ಪುಗಳ ದರ ಇಳಿಕೆಯಾಗಿದ್ದು, ಅಗ್ಗವಾಗಿದೆ. ಕೊತ್ತಂಬರಿ ಸೊಪ್ಪು ₹20–25 ಒಂದು ಕಟ್ಟು, ಪುದಿನಾ ₹20–25, ಮೆಂತ್ಯೆ ಸೊಪ್ಪು ಚಿಕ್ಕ ಗಾತ್ರದ ₹10ಗೆ ಮೂರು, ರಾಜಗಿರಿ, ಪುಂಡಿಪಲ್ಯೆ, ಸಬ್ಬಸಿಗಿ ಸೊಪ್ಪುಗಳು ಅಗ್ಗವಾಗಿದೆ.
***
ಕೆಲ ತರಕಾರಿಗಳ ದರ ಹೆಚ್ಚು –ಕಡಿಮೆ ಇದೆ. ಬೇರೆ ಜಿಲ್ಲೆಯಿಂದ ಬಂದ ತರಕಾರಿಗಳು ಬೆಲೆ ಏರಿಕೆಗೆ ಕಾರಣವಾಗಿವೆ ಮಹಮ್ಮದ್ ಜಲಾಲ್ದ್ದೀನ್, ತರಕಾರಿ ವ್ಯಾಪಾರಿ
***
ತರಕಾರಿ, ಸೊಪ್ಪುಗಳು ಕಡಿಮೆ ದರದಲ್ಲಿ ಸಿಗುತ್ತಿವೆ. ಮೆಂತ್ಯೆ, ಪಾಲಕ್ ಸೊಪ್ಪು ತೀರಾ ಅಗ್ಗವಾಗಿದ್ದು, ಗ್ರಾಹಕರು ಖುಷಿಯಿಂದ ಖರೀದಿಸುವಂತಾಗಿದೆ ಶರಣು, ಗ್ರಾಹಕ