ಯಾದಗಿರಿ: ನಗರಸಭೆಯಿಂದ ಅನುಮತಿ ಪಡೆಯದೇ ಶುದ್ಧ ಕುಡಿಯುವ ನೀರಿನ ಘಟಕ ನಡೆಸುತ್ತಿದ್ದ ಘಟಕಗಳ ಮೇಲೆ ನಗರಸಭೆ ಅಧ್ಯಕ್ಷ ಸುರೇಶ ಅಂಬಿಗೇರ ನೇತೃತ್ವದಲ್ಲಿ ಶುಕ್ರವಾರ ದಾಳಿ ಮಾಡಿ ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಾಗಿದೆ.
ಅಜೀಜ್ ಕಾಲೊನಿಯ ಮೆಟ್ರೋ, ಸಹರಾ ಕಾಲೊನಿ ಬಳಿಯಿರುವ ನಿಬ್ರಾಸ್ ಮಿನರಲ್ ವಾಟರ್ ಘಟಕದ ಮೇಲೆ ದಾಳಿ ಮಾಡುವ ಮೂಲಕ ಅಕ್ರಮ ದಂಧೆ ಬಯಲಿಗೆ ಎಳೆದಿದ್ದಾರೆ.
ರಾಜಾರೋಷವಾಗಿ ನಡೆಯುತ್ತಿದ್ದ ಅಕ್ರಮ ನೀರಿನ ದಂಧೆಗೆ ಕಡಿವಾಣ ಹಾಕಬೇಕು ಎಂಬ ಉದ್ದೇಶದಿಂದಾಗಿಯೇ ನಗರಸಭೆ ಅಧ್ಯಕ್ಷ ಸುರೇಶ ಅಂಬಿಗೇರ ಅವರು ದಾಳಿಯನ್ನು ರಹಸ್ಯವಾಗಿ ಇಟ್ಟು ಅಧಿಕಾರಿಗಳ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ. ಇನ್ನೂ ಅಕ್ರಮ ನೀರಿನ ದಂಧೆ ನಡೆಸುವವರಿಗೆ ನೇರವಾಗಿ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಶುದ್ಧ ನೀರಿನ ಘಟಕದಲ್ಲಿ ಅವಧಿ ಮೀರಿದ ನೀರಿನ ಪಾಕೀಟ್, ರಸಾಯನಿಕಗಳನ್ನು ಕಂಡು ಅಧ್ಯಕ್ಷ ಸೇರಿದಂತೆ ನಗರಸಭೆ ಅಧಿಕಾರಿಗಳು ದಂಗಾಗಿದ್ದಾರೆ. ಹಲವಾರು ವರ್ಷಗಳಿಂದ ಈ ಧಂದೆ ನಡೆಸುತ್ತಿರುವುದು ದಾಳಿ ವೇಳೆ ಬಯಲಾಗಿದೆ.
ಘಟಕದ ಮಾಲಿಕರನ್ನು ಈ ಬಗ್ಗೆ ಪ್ರಶ್ನಿಸಿದರೆ ಸರಿಯಾದ ಅಧ್ಯಕ್ಷರಿಗೆ ಸರಿಯಾದ ಉತ್ತರ ನೀಡಿಲ್ಲ. ಇದರಿಂದ ಕೋಪಗೊಂಡ ಅಂಬಿಗೇರ ಎಲ್ಲ ಪ್ಲಾಸ್ಟಿಕ್ಗಳನ್ನು ವಶಪಡಿಸಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಪ್ಲಾಸ್ಟಿಕ್ ವಶಪಡಿಸಿಕೊಂಡು ನಗರಸಭೆಯ ಕಸದ ವಾಹನ, ಟ್ರ್ಯಾಕ್ಟರ್ನಲ್ಲಿ ಸಾಗಿಸಲಾಯಿತು.
ಅನುಮತಿ ಪಡೆಯದೇ ಆರಂಭ: ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಲು ನಗರಸಭೆಯಿಂದ ಅನುಮತಿ ಪಡೆಯಬೇಕು. ನೀರು ಮಾರಾಟ ಮಾಡುವವರು ಕಡ್ಡಾಯವಾಗಿ ಐಎಸ್ಐ ಮಾರ್ಕ್ ಹೊಂದಿರಬೇಕು. ಸಂಬಂಧಿಸಿದ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕಿದೆ. ಆದರೆ, ಆದರೆ ಇದ್ಯಾವುದು ಇಲ್ಲದಿರುವುದು ದಾಳಿ ವೇಳೆ ಮಾಡಿರುವ ತನಿಖೆಯಲ್ಲಿ ತಿಳಿದು ಬಂದಿದೆ. ಅಕ್ರಮವಾಗಿ ಈ ಪರಿಯಾಗಿ ದಂಧೆ ಬೆಳೆಯಲು ಮೊದಲಿನಿಂದಲೂ ನಿರ್ಲಕ್ಷ್ಯತನ ಮಾಡಿರುವುದೇ ಮೂಲ ಕಾರಣವಾಗಿದೆ. ಹೀಗಾಗಿಯೇ ಇದರ ಬಗ್ಗೆ ಸಾಕಷ್ಟು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಅಧ್ಯಕ್ಷರು ದಿಟ್ಟವಾಗಿ ದಾಳಿ ಮಾಡುವ ಮೂಲಕ ಬಿಸಿ ಮುಟ್ಟಿಸಿದ್ದಾರೆ. ದಾಳಿಗೆ ಬೆಚ್ಚಿ ಬಿದ್ದಿರುವ ಅಕ್ರಮವಾಗಿ ದಂಧೆ ನಡೆಸುವವರು ಕಂಗಾಲು ಆಗಿದ್ದಾರೆ.
ದಾಳಿ ವೇಳೆ ಪರಿಸರ ಎಂಜಿನಿಯರ್ ಸಲೀಂ, ನಗರಸಭೆ ಎಸ್ಐ ಸುರೇಶ್ ಇದ್ದರು.
***
ಅನುಮತಿ ಪಡೆಯದೇ ಹಲವಾರು ವರ್ಷಗಳಿಂದ ಶುದ್ಧ ಕುಡಿಯುವ ನೀರಿನ ಘಟಕಗಳ ಮೇಲೆ ದಾಳಿ ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಾಗಿದೆ. ಕ್ರಿಮಿನಲ್ ಕೇಸ್ ದಾಖಲಿಸುವ ಚಿಂತನೆಯಿದೆ.
–ಸುರೇಶ ಅಂಬಿಗೇರ, ನಗರಸಭೆ ಅಧ್ಯಕ್ಷ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.