ಯಾದಗಿರಿ: ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ (ಪಿಎಂಜಿಎಸ್ವೈ) ಯೋಜನೆಯಡಿಗುರುಮಠಕಲ್ ಮತಕ್ಷೇತ್ರದ ಹೊನಗೇರಾ ಗ್ರಾಮದ ಜಮೀನುಗಳಲ್ಲಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪಿಸಿ, ವರ್ತೂರು ಪ್ರಕಾಶ್ ಯುವ ಘರ್ಜನೆ ಸಂಘಟನೆಯ ಕಾರ್ಯಕರ್ತರು ಭಾನುವಾರ ಪ್ರತಿಭಟನೆ ನಡೆಸಿದರು.
ಪಿಎಂಜಿಎಸ್ವೈ ಉಪವಿಭಾಗದಿಂದ ಯಡ್ಡಳ್ಳಿ ಗ್ರಾಮದಿಂದ ಕಟಗಿ ಶಹಾಪುರ, ವಾಯ ಹೊನಗೇರಾದಿಂದ ಯಾದಗಿರಿ ತೆರಳುವ ಮಾರ್ಗದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆ. ಇದು ರೈತರ ಜಮೀನುಗಳ ಮೇಲೆ ಹಾದು ಹೋಗಿದೆ. ಹೊನಗೇರ ಗ್ರಾಮದ ರೈತರು ಜಮೀನಿಗಳಿಗೆ ಧಕ್ಕೆಯಾಗಿದೆ ಎಂದು ಪ್ರತಿಭಟನೆ ನಿರತರು ಆರೋಪಿಸಿದರು.
ಸಣ್ಣ ರೈತರ ಜಮೀನುಗಳಲ್ಲಿ ಬೆಳೆದಿದ್ದ ಸುಮಾರು 30ರಿಂದ 40 ಎಕರೆ ಪ್ರದೇಶದ ಬೆಳೆಗಳು ನಾಶವಾಗಿವೆ. ರಸ್ತೆ ಪಕ್ಕದ ಜಮೀನುಗಳಲ್ಲಿ ಭತ್ತ, ಹತ್ತಿ, ಶೇಂಗಾದಂತಹ ಬೆಳೆ ಬೆಳೆಯಲಾಗಿದೆ. 10ರಿಂದ 20 ಅಡಿ ರೈತರ ಜಮೀನು ವ್ಯಾಪ್ತಿಯೊಳಗೆ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಆಪಾದಿಸಿದರು.
ಪಿಎಂಜಿಎಸ್ವೈ ಉಪವಿಭಾಗ ಯಾದಗಿರಿ ಅಧಿಕಾರಿಗಳು ಮತ್ತು ಗುತ್ತಿಗೆದಾರರು ರಸ್ತೆ ನಿರ್ಮಾಣದಲ್ಲಿ ರೈತರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ರಸ್ತೆಗೆ ಬಳಸಿಕೊಂಡ ಕೃಷಿ ಜಮೀನನ್ನು ಕೃಷಿಕರಿಗೆ ಮರಳಿಸದೆ ಇದ್ದರೇ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಸಂಘಟನೆಯ ಜಿಲ್ಲಾ ಅಧ್ಯಕ್ಷ ಐಕೂರು ಅಶೋಕ, ಆಕಾಶ್ ಭಂಡಾರಿ, ಸಿದ್ದು ಕಾಳಿಗಿ, ಮರಲಿಂಗ ಸಿದ್ದನೂರ್, ಭೀಮಣ್ಣ ಗೊಬ್ಬೆನೋರ್, ಭೀಮಣ್ಣ ಅಕ್ಕಿ, ರಾಜು, ಮರಿಸ್ವಾಮಿ ಹೊನ್ನಪ್ಪ, ಮರಿಲಿಂಗ, ನಾಗಪ್ಪ ಹೊನಗೇರ, ಗ್ರಾಮದ ರೈತರು ಇದ್ದರು.