ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶ್ರೀಕೃಷ್ಣ ಜಯಂತಿಯನ್ನು ಸರಳವಾಗಿ ಭಾನುವಾರ ಆಚರಿಸಲಾಯಿತು.
ಶ್ರೀಕೃಷ್ಣ ಜಯಂತಿಯನ್ನು ಸರ್ಕಾರಿ ಕಚೇರಿಗಳಲ್ಲಿ ಸರಳ ಮತ್ತು ಸಾಂಕೇತಿಕವಾಗಿ ಕಡ್ಡಾಯವಾಗಿ ಆಚರಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದರು. ಅದರಂತೆ ಕಚೇರಿಗಳಲ್ಲಿ ಸರಳವಾಗಿ ನಡೆಸಲಾಯಿತು.
ಯಾದವ ಸಮುದಾಯದ ಮುಖಂಡರು ತಮ್ಮ ಗ್ರಾಮಗಳಲ್ಲಿ ಶ್ರೀಕೃಷ್ಣ ಜಯಂತಿಯನ್ನು ಕೋವಿಡ್ ನಿಯಮ ಪಾಲಿಸಿ ಆಚರಣೆ ಮಾಡಿದರು. ಕಳೆದ ವರ್ಷವೂ ಪ್ರವಾಹ ಮತ್ತು ಕೋವಿಡ್ ಕಾರಣದಿಂದ ಸರಳವಾಗಿ ಮಾಡಲಾಗಿತ್ತು.
ಜಿಲ್ಲಾಡಳಿತದಿಂದ ಸರಳ ಆಚರಣೆ: ಕೋವಿಡ್ ಕಾರಣದಿಂದ ಶ್ರೀಕೃಷ್ಣ ಜಯಂತಿಯನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಜಿಲ್ಲಾಡಳಿತ ಭವನದಲ್ಲಿ ಭಾನುವಾರ ಸರಳವಾಗಿ ಆಚರಿಸಲಾಯಿತು.
ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಆರ್. ಅವರು ಶ್ರೀಕೃಷ್ಣ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ್, ಸಮಾಜದ ಮುಖಂಡರಾದ ತಾಯಪ್ಪ ಯಾದವ, ಅಮರೇಶ ಯಾದವ, ಮಾಳಪ್ಪ ಪುರ್ಲೆ ಯಾದವ್, ಮಹೇಶ ಯಾದವ ಇದ್ದರು.