ಗಂಗಾವತಿ: ತನ್ನ ಇಲಾಖೆಯ ಅನುಮತಿಯಿಲ್ಲದೇ ಮರಗಿಡ ಕತ್ತರಿಸುವಂತಿಲ್ಲ ಎಂದು ಸಮಾಜಿಕ ಅರಣ್ಯ ಇಲಾಖೆ ಆಕ್ಷೇಪದ ಮಧ್ಯೆಯೂ ಬೃಹತ್ ಗಾತ್ರದ ಮರಗಳನ್ನು ಕಡಿದು ನೆಲಕ್ಕುರುಳಿಸಿದ ಘಟನೆ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಂಗಳವಾರ ನಡೆದಿದೆ.
ಕೃಷಿ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರವು ತನ್ನ ಅವರಣದಲ್ಲಿ ನಿರುಪಯುಕ್ತವಾಗಿ ಬಿದ್ದ, ಒಣಗಿದ ಮರಗಳನ್ನು ಕತ್ತರಿಸಿ ಸಾಗಿಸುವ ಕಾರ್ಯಕ್ಕೆ ಇತ್ತೀಚಿಗೆ ಟೆಂಡರ್ ಕರೆದಿತ್ತು. ಆದರೆ ಟೆಂಡರ್ ಪಾರದರ್ಶಕ ಇಲ್ಲ ಆರೋಪ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡವರಿಂದ ವ್ಯಕ್ತವಾಗಿತ್ತು.
ಮರ-ಗಿಡಗಳನ್ನು ಕತ್ತರಿಸಲು ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಬೇಕು. ಶೇ, 22ರಷ್ಟು ತೆರಿಗೆ ಪಾವತಿಸಬೇಕೆಂಬ ನಿಯಮ ಇದೆ. ಅಲ್ಲದೇ ಟೆಂಡರ್ ಪಡೆದುಕೊಂಡ ವ್ಯಕ್ತಿ ಅರಣ್ಯ ಇಲಾಖೆಯ ನೋಂದಾಯಿತ ತೆರಿಗೆದಾರನಾಗಿರಬೇಕು ಎಂದು ಹೇಳಲಾಗುತ್ತಿದೆ.
ಆದರೆ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯದೇ ಕೃಷಿ ವಿಜ್ಞಾನ ಕೇಂದ್ರ ಮರಗಳನ್ನು ಕತ್ತರಿಸಿದೆ ಎಂಬ ಆರೋಪ ಇದೆ. ಆರೋಗ್ಯವಂತ ಮರಗಳನ್ನು ಕತ್ತರಿಸಬಾರದೆಂಬ ನಿಯಮವನ್ನೂ ವಿಜ್ಞಾನ ಕೇಂದ್ರದ ಸಿಬ್ಬಂದಿ ಗಾಳಿಗೆ ತೂರಿದೆ ಎಂದು ಅಶೋಕ ಜಾಡಿ ಎಂಬ ವ್ಯಾಪಾರಿ ದೂರಿದ್ದಾರೆ.
ಅರಣ್ಯ ಇಲಾಖೆಯ ಸಿಬ್ಬಂದಿ ನೋಟಿಸ್ಗೆ ಬೆಲೆ ಕೊಡದ ವಿಜ್ಞಾನ ಕೇಂದ್ರದ ಅಧಿಕಾರಿಗಳು ಆ ಸಿಬ್ಬಂದಿ ಎದುರಲ್ಲೆ ಟೆಂಡರ್ ಪಡೆದುಕೊಂಡ ವ್ಯಕ್ತಿಗೆ ಮರಕತ್ತರಿಸಿ ಸಾಗಿಸುವ ಪ್ರಕ್ರಿಯೆ ನಿರಾತಂಕವಾಗಿ ಸಾಗಲು ಅನುವು ಮಾಡಿಕೊಟ್ಟರು ಎನ್ನಲಾಗಿದೆ.
ಕೃಷಿ ಸಂಶೋಧನಾ ಕೇಂದ್ರದ ಸಿಬ್ಬಂದಿ ತಮಗೆ ಬೇಕಾದ ಗುತ್ತಿಗೆದಾರರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಟೆಂಡರ್ ಪ್ರಕ್ರಿಯೆಯಲ್ಲಿ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಮಾಜಿ ಸಚಿವ ಸಂಧಾನ: ಕೆ.ವಿ.ಕೆಯ ಆವರಣದಲ್ಲಿನ ಗಿಡ ಕತ್ತರಿಸುವ ಈ ಟೆಂಡರ್ಗೆ ಸಂಬಂಧಿಸಿದಂತೆ ಇಬ್ಬರು ಕಟ್ಟಿಗೆ ವ್ಯಾಪಾರಿಗಳಲ್ಲಿ ಉಂಟಾಗಿರುವ ವಿವಾದಕ್ಕೆ ಸಂಬಂಧಿಸಿದಂತೆ ಮಂಗಳವಾರ ಮಾಜಿ ಸಚಿವರೊಬ್ಬರ ಸಮ್ಮುಖದಲ್ಲಿ ಸಂಧಾನಸಭೆ ನಡೆಯಿತು ಎಂದು ತಿಳಿದು ಬಂದಿದೆ.
ಕಡಿಮೆ ಮೊತ್ತಕ್ಕೆ ಟೆಂಡರ್ ನೀಡಿದ ಕೆ.ವಿ.ಕೆ. ಅಧಿಕಾರಿಗಳ ಕ್ರಮ ಪ್ರಶ್ನಿಸಿ ಸಾರ್ವಜನಿಕರ ಪರ ವ್ಯಕ್ತಿಯೊಬ್ಬರು ಅರಣ್ಯ ಸಚಿವ, ಸಾಮಾಜಿಕ ಅರಣ್ಯ ಇಲಾಖೆಯ ನಿರ್ದೇಶಕ, ಕೃಷಿ ವಿಶ್ವ ವಿದ್ಯಾಲಯದ ಕುಲಪತಿ ಸೇರಿದಂತೆ ವಿವಿಧ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.