ಸೋಮವಾರಪೇಟೆ: ಜಿಲ್ಲೆಯಲ್ಲಿ ಕೃಷಿ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕೆ ವರ್ಗಾವಣೆ ಮಾಡಿರುವ ಆರೋಪದಡಿ ತಾಲ್ಲೂಕಿನ ಕಂದಾಯ ಇಲಾಖೆಯ 11 ನೌಕರರನ್ನು ಅಮಾನತುಗೊಳಿಸಿರುವ ಕ್ರಮವನ್ನು ಖಂಡಿಸಿ ತಾಲ್ಲೂಕು ಕಚೇರಿ ನೌಕರರು ಶುಕ್ರವಾರ ಪ್ರತಿಭಟಿಸಿದರು.
ಕಂದಾಯ ಇಲಾಖೆ ನೌಕರರ ಸಂಘದ ಆಶ್ರಯದಲ್ಲಿ ತಹಶೀಲ್ದಾರ್ ಎ.ದೇವರಾಜ್ ಅವರಿಗೆ ಮನವಿ ಸಲ್ಲಿಸಿದ ನೌಕರರು ನಂತರ ಲೇಖನಿ ಸ್ಥಗಿತಗೊಳಿಸಿ ಕಚೇರಿ ಹೊರಕ್ಕೆ ಬಂದು ಸರ್ಕಾರದ ಕ್ರಮವನ್ನು ಖಂಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಿರಸ್ತೇದಾರ್ ಚಂದ್ರಮೌಳಿ, ಕಂದಾಯ ಇಲಾಖೆಯ ಇಬ್ಬರು ನಿರೀಕ್ಷಕರು ಹಾಗೂ 9 ಗ್ರಾಮ ಲೆಕ್ಕಿಗರಿಗೆ ಯಾವುದೇ ಸೂಚನೆ ನೀಡದೆ ದಿಢೀರ್ ಅಮಾನತುಗೊಳಿಸಿರುವುದು ಖಂಡನೀಯ ಎಂದರು.
ಸರ್ಕಾರದ ಇಂತಹ ನಿಯಮದಿಂದಾಗಿ ಸಾರ್ವಜನಿಕರ ಕೆಲಸ ಕಾರ್ಯಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಸಹೋದ್ಯೋಗಿಗಳಿಗೂ ಹೆಚ್ಚಿನ ಕಾರ್ಯದ ಒತ್ತಡ ಬೀಳುವುದರಿಂದ ಮುಂದಿನ ದಿನಗಳಲ್ಲಿ ಜಿಲ್ಲಾ ಸಂಘದ ನಿರ್ದೇಶನದ ಅನ್ವಯ ಪ್ರತಿಭಟನೆಯ ರೂಪುರೇಷೆ ನಿಗದಿಗೊಳಿಸಲಾಗುತ್ತದೆ ಎಂದು ನುಡಿದರು.
ಪ್ರತಿಭಟನೆಯಲ್ಲಿ ಕಂದಾಯ ಇಲಾಖಾ ನೌಕರರ ಸಂಘದ ಕಾರ್ಯದರ್ಶಿ ಪೂಣಚ್ಚ, ಶಿರಸ್ತೇದಾರ್ ಗಣೇಶ್ ಹಾಗೂ ಸಿಬ್ಬಂದಿ, ಭೂ ಮಾಪನಾ ಇಲಾಖಾ ಪರಿವೀಕ್ಷಕರು ಭಾಗವಹಿಸಿದ್ದರು.