ಬಳ್ಳಾರಿ: ರಾಷ್ಟ್ರದ ಗಡಿ ರಕ್ಷಣೆಯ ಸೇವೆಯಲ್ಲಿ ತೊಡಗಿದ್ದಾಗ ವೈರಿಗಳ ದಾಳಿಗೆ ಸಿಲುಕಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರನ್ನು ಸದಾ ಸ್ಮರಿಸುವಂತಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಾಲಚಂದ್ರ ಜಾರಕಿಹೊಳಿ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಗುರುವಾರ ಅಮರ್ ಜವಾನ್ ಸ್ಮಾರಕ ಅನಾವರಣಗೊಳಿಸಿ ಅವರು ಮಾತನಾಡಿದರು.
`ಯುದ್ಧದ ಸಂದರ್ಭ ಹಾಗೂ ಗಡಿ ಕಾಯುವ ವೇಳೆ ರಾಷ್ಟ್ರಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ ವೀರಯೋಧರ ಕುರಿತ ಸ್ಮಾರಕವನ್ನು ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಬಳ್ಳಾರಿಯಲ್ಲಿ ನಿರ್ಮಿಸಿರುವುದು ಹೆಮ್ಮೆಯ ವಿಷಯ. ಜನತೆ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿ ಕಣ್ಮನ ತುಂಬಿಕೊಂಡಂತೆಯೇ, ಈ ಸ್ಮಾರಕಕ್ಕೂ ಭೇಟಿ ನೀಡಿ ವೀರ ಯೋಧರಿಗೂ ನಮನ ಸಲ್ಲಿಸಬೇಕು~ ಎಂದು ಅವರು ಹೇಳಿದರು.
ತಮ್ಮ ಊರು, ಅವಲಂಬಿತರು, ಕುಟುಂಬ ಸದಸ್ಯರು, ಸ್ನೇಹಿತರು ಮತ್ತಿತರರಿಂದ ದೂರ ಉಳಿದು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುವ ವೀರ ಯೋಧರ ಸ್ಮಾರಕಗಳು ಉತ್ತರ ಭಾರತದ ವಿವಿಧೆಡೆ ಇವೆ. ದಕ್ಷಿಣ ಭಾರತದಲ್ಲಿ ಇದೇ ಮೊದಲ ಬಾರಿಗೆ ಇಲ್ಲಿ ಸ್ಮಾರಕ ನಿರ್ಮಿಸಲಾಗಿದೆ ಎಂದು ಧಾರವಾಡದ ಸೈನಿಕ ಕಲ್ಯಾಣ ಇಲಾಖೆಯ ಉಪನಿರ್ದೇಶಕ, ಭಾರತೀಯ ವಾಯುವಪಡೆಯ ನಿವೃತ್ತ ವಿಂಗ್ ಕಮಾಂಡರ್ ಈಶ್ವರ್ ಕೋಡಳ್ಳಿ ಹೇಳಿದರು.
ಶಾಸಕ ಜಿ.ಸೋಮಶೇಖರರೆಡ್ಡಿ, ಮೇಯರ್ ಪಾರ್ವತಿ ಇಂದುಶೇಖರ್, ಉಪ ಮೇಯರ್ ಶಶಿಕಲಾ, ಜಿ.ಪಂ. ಉಪಾಧ್ಯಕ್ಷ ಚೆನ್ನಬಸವನಗೌಡ, ಬುಡಾ ಅಧ್ಯಕ್ಷ ವಿನೋದ್ಕುಮಾರ್, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಕೆ.ರಾಮಲಿಂಗಪ್ಪ, ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಚಂದ್ರಗುಪ್ತ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಶೇಖರ ಕ್ಯಾತನ್ ಈ ಸಂದರ್ಭ ಹಾಜರಿದ್ದರು.