ಬೆಂಗಳೂರು: ಕೃಷಿ ಡಿಪ್ಲೊಮೊ, ಕೃಷಿ ಬಿಎಸ್ಸಿ ಮತ್ತು ತತ್ಸಮಾನ ಕೋರ್ಸ್ಗಳ ಪ್ರವೇಶಕ್ಕಾಗಿ ರೈತರ ಮಕ್ಕಳಿಗೆ ಮೀಸಲಾತಿ ಪ್ರಮಾಣ ಹೆಚ್ಚಿಸಿರುವ ಕಾರಣ ರಾಜ್ಯದ ವಿವಿಧ ಕೃಷಿ ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿರುವ ವಿವಿಧ ಕಾಲೇಜುಗಳ 2,460 ಸೀಟುಗಳ ಪೈಕಿ 1,230 ಸೀಟುಗಳು ಮೀಸಲಾತಿಗೆ ಒಳಪಡುತ್ತವೆ.
ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಈ ಮಾಹಿತಿ ನೀಡಿದ್ದಾರೆ. ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೀಸಲಾತಿ ಪ್ರಮಾಣ ಶೇಕಡಾ 40 ರಿಂದ ಶೇಕಡಾ 50 ಕ್ಕೆ ಹೆಚ್ಚಿಸಲು ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಈ ಹಿಂದೆ 983 ಸೀಟುಗಳು ಮಾತ್ರ ಮೀಸಲಾತಿ ವ್ಯಾಪ್ತಿಗೆ ಒಳಪಡುತ್ತಿತ್ತು.
ರೈತರ ಕಾಳಜಿಯಿಂದಾಗಿ ರಾಜ್ಯ ಸರ್ಕಾರ ರೈತ ಪರ ಕ್ರಮವನ್ನು ತೆಗೆದುಕೊಂಡಿದೆ. ರೈತರ ಮಕ್ಕಳು ಈ ಕೋರ್ಸ್ಗಳನ್ನು ಓದಿ ಬಂದರೆ, ಗ್ರಾಮೀಣ ಭಾಗದಲ್ಲಿ ಸ್ವಯಂ ಉದ್ಯಮದಾರರಾಗಿ ಕೃಷಿಯಲ್ಲಿ ತಾಂತ್ರಿಕತೆ ಅಳವಡಿಸಿಕೊಳ್ಳುವುದರ ಜತೆಗೆ, ಗ್ರಾಮೀಣ ಯುವಕರಿಗೆ ಉದ್ಯೋಗಾವಕಾಶ ಒದಗಿಸಬಹುದು ಎಂಬ ಕಾರಣಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಿಸಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬದ್ಧತೆಯಿಂದ ಈ ಕಾರ್ಯ ಸಾಧ್ಯವಾಗಿದೆ ಎಂದು ಅವರು ಹೇಳಿದರು.