ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಡಿಗಳ ‘ಜೇನುನುಡಿ’ ಪಠ್ಯವಾಗಿ...

ಅಳಿವಿನಂಚಿನಲ್ಲಿರುವ ಭಾಷೆಗೆ ಸಾಹಿತ್ಯ ರೂಪ l ಶೇ 50ರಷ್ಟು ಜೇನುನುಡಿ– ಶೇ50ರಷ್ಟು ಕನ್ನಡ
Last Updated 9 ಡಿಸೆಂಬರ್ 2019, 19:46 IST
ಅಕ್ಷರ ಗಾತ್ರ

ಶಾಲೆಗು ಹೋಗೊ ಬಾನೆ
ಅದು ನಂಗ ಶಾಲೆ ಕಣೆ
ಅಕ್ಷರ ಕಲಿ ಬಾನೆ
ನಂಗಲು ಭಾಷೆಲು ಕಲಿನೆ...

...ಹೀಗೆ ಜೇನು ಕುರುಬರ ಮಕ್ಕಳನ್ನು ಶಾಲೆಗೆ ಸೆಳೆಯಲು, ಅವರಿಗೆ ಅಕ್ಷರ ಕಲಿಸಲು ಅವರದೇ ಭಾಷೆಯಲ್ಲಿ, ಅವರ ಸಮುದಾಯದವರೇ ರಚಿಸಿದ ಹಾಡುಗಳು ಪಠ್ಯವಾಗಲಿವೆ. ಲಿಪಿ ಇಲ್ಲದ, ಅಳಿವಿನ ಅಂಚಿನಲ್ಲಿರುವ ಜೇನು ಕುರುಬರ ಭಾಷೆಯನ್ನು ಉಳಿಸಲು ಮೈಸೂರಿನ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮುಂದಾಗಿದೆ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಅಂಗವಾಗಿ, ಬುಡಕಟ್ಟು ಜನಾಂಗದ ಭಾಷೆ, ಸಂಸ್ಕೃತಿ ಉಳಿಸಿ ಬೆಳೆಸಲು ಬುಡಕಟ್ಟು ಸಂಶೋಧನಾ ಸಂಸ್ಥೆ ಯೋಜನೆಯೊಂದನ್ನು ರೂಪಿಸಿದ್ದು, ನಲಿ–ಕಲಿ ರೂಪದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದಪಠ್ಯವಾಗಿ ಬರಲಿದೆ.

ಇದರ ಹಿಂದೆ ಎರಡು ಉದ್ದೇಶಗಳಿವೆ. ಒಂದು– ಆಡುಮಾತಿನಲ್ಲಿರುವ ಜೇನು ಕುರುಬರ ಭಾಷೆಯನ್ನು ಮುಂದಿನ ತಲೆಮಾರಿಗೆ ಉಳಿಸಲು ಸಾಹಿತ್ಯದ ರೂಪ ಕೊಡುವುದು. ಇದಕ್ಕಾಗಿ ಪಠ್ಯವಾಗಿ ಅಳವಡಿಸುವುದು, ಇನ್ನೊಂದು; ಮಕ್ಕಳ ಪರಿಸರದ ಭಾಷೆಯಲ್ಲೇ ಕಲಿಕೆಯನ್ನು ಕಟ್ಟಿಕೊಡುವುದು. ಇದಕ್ಕಾಗಿ ಜೇನು ನುಡಿಯ ಹಾಡು, ನುಡಿಗಟ್ಟು ಮೊದಲಾದವುಗಳನ್ನು ಪಠ್ಯವಾಗಿ ಕೊಡುವುದು. ಜತೆಗೆ, ಕನ್ನಡ ಕಲಿಸುವಂತಾಗಬೇಕು. ಅಂದರೆ ಶೇ 50ರಷ್ಟು ಜೇನು ನುಡಿ, ಶೇ 50 ರಷ್ಟು ಕನ್ನಡ ಕಲಿಸುವುದು. ಇದರಿಂದ ಶಾಲೆಗೆ ತೆರಳುವ ಜೇನು ಕುರುಬ ಚಿಣ್ಣರುಭಾಷಾ ತೊಡಕನ್ನು ಮೀರಲಿದ್ದಾರೆ.

ಸಮಸ್ಯೆ ಏನೆಂದರೆ, ಹಾಡಿಯಲ್ಲಿದ್ದಾಗ ಜೇನು ನುಡಿಯಲ್ಲಿ ಮಾತನಾಡುವ ಮಕ್ಕಳು, ಶಾಲೆಗೆ ಪ್ರವೇಶ ಪಡೆದ ಕೂಡಲೇ ಕನ್ನಡ ಕಲಿಯಬೇಕು. ಇದರಿಂದ ಸಮಸ್ಯೆಯಾಗಿ ಶಾಲೆ ತೊರೆಯುವವರೇ ಹೆಚ್ಚು. ಜತೆಗೆ, ಬಡತನ, ಅರಿವಿನ ಕೊರತೆ, ವಲಸೆ, ಶಿಕ್ಷಣ ಪಡೆಯಲು ಪೂರಕ ವಾತಾವರಣ ಇಲ್ಲದಿರುವುದು, ಗಣಿತ, ವಿಜ್ಞಾನದಂಥ ವಿಷಯ ಕಂಡು ಭಯಗೊಂಡು ಶಾಲೆ ತೊರೆಯುವ ಮಕ್ಕಳೇ ಹೆಚ್ಚು. ಹೀಗೆ ಶಾಲೆ ಬಿಡುವ ಮಕ್ಕಳನ್ನು ಹಿಡಿದಿಡಲು ಅವರ ಭಾಷೆಯಲ್ಲಿಯೇ ಕಲಿಸಲು ಬುಡಕಟ್ಟು ಸಂಶೋಧನಾ ಸಂಸ್ಥೆ ಸಜ್ಜಾಗಿದೆ. ಇದಕ್ಕಾಗಿ ಮೈಸೂರಿನ ಕುವೆಂಪುನಗರದಲ್ಲಿರುವ ಸಂಶೋಧನಾ ಸಂಸ್ಥೆಯಲ್ಲಿ ಈಗಾಗಲೇ ಸಭೆ, ಕಮ್ಮಟಗಳು ನಡೆದಿವೆ.

ಒಂದನೇ ತರಗತಿಯಲ್ಲಿ ವರ್ಣಮಾಲೆ, ಕಾಗುಣಿತ, ಎರಡನೇ ತರಗತಿಯಲ್ಲಿ ಮುಂದುವರಿದ ಕಾಗುಣಿತ ಕಲಿತ, ಒತ್ತಕ್ಷರ, ಗುಣಿತಾಕ್ಷರಗಳನ್ನು ಕಲಿಸುವ ಉದ್ದೇಶವಿದೆ. ಇದಕ್ಕಾಗಿ ‘ಆಲಿಸುವುದು’, ‘ಮಾತನಾಡುವುದು’, ‘ಓದುವುದು’ ಹಾಗೂ ‘ಬರೆಯುವುದು’ ಎನ್ನುವ ಸೂತ್ರಗಳನ್ನು ಅಳವಡಿಸಲಾಗುವುದು. ಆಲಿಸುವುದರಲ್ಲಿ ಹಾಡು, ಕಥೆ, ಸಂಭಾಷಣೆ ಒಳಗೊಂಡಿದ್ದರೆ ಮಾತನಾಡುವುದರಲ್ಲಿ ಜೇನು ನುಡಿಯೊಂದಿಗೆ ಕನ್ನಡ ಮಾತನಾಡುವುದನ್ನು ಅಭ್ಯಾಸ ಮಾಡಿಸಲಾಗುವುದು. ಏಕೆಂದರೆ, ‘ಹಾಡಿಯಲ್ಲಿ ನಮ್ಮದೇ ಭಾಷೆಯಲ್ಲಿ ಮಾತಾಡ್ತೇವೆ. ಹೀಗಾಗಿ ಶೇಕಡಾ ಹತ್ತರಷ್ಟೂ ಕನ್ನಡ ಗೊತ್ತಿರಲ್ಲ. ಇದರಿಂದ ಐದನೇ ತರಗತಿಯಲ್ಲಿದ್ದರೂ ನಮ್ಮ ಮಕ್ಕಳಿಗೆ ಕನ್ನಡ ಓದಲು ಬರುವುದಿಲ್ಲ’ ಎನ್ನುವ ವಾಸ್ತವ ಬಿಚ್ಚಿಡುತ್ತಾರೆ ಕಮ್ಮಟದಲ್ಲಿ ಭಾಗವಹಿಸಿರುವ ಪಿರಿಯಾಪಟ್ಟಣ ತಾಲ್ಲೂಕಿನ ಮರಳಕಟ್ಟೆ ಹಾಡಿಯ ಮಧುಕುಮಾರ್.

‘ವಲಸೆ ಕಾರ್ಮಿಕರಾಗಿರುವ ಜೇನು ಕುರುಬರು ತಮ್ಮೊಂದಿಗೆ ಮಕ್ಕಳನ್ನೂ ಕರೆದೊಯ್ಯುತ್ತಾರೆ. ಹೀಗಾಗಿ ಶಾಲೆ ಬಿಡುವ ಮಕ್ಕಳ ಮನವೊಲಿಸಿ ಶಾಲೆಗೆ ಕರೆತರುವುದೇ ಸಾಹಸ. ಒತ್ತಾಯದಿಂದ ಕೂರಿಸಿ, ಕನ್ನಡ ಕಲಿಸುವಾಗ ಅಳಲು ಶುರು ಮಾಡುತ್ತಾರೆ. ಒಂದನೇ ತರಗತಿ ಮುಗಿಯಲು ಬಂದರೂ ಸ್ಲೇಟು ಹಿಡಿಯಲ್ಲ, ಬಳಪ ಮುಟ್ಟಲ್ಲ. ಅವರ ಪಾಡಿಗೆ ಅವರನ್ನು ಬಿಡಬೇಕು. ಇದಕ್ಕಾಗಿ ಅವರ ಭಾಷೆಯಲ್ಲೇ ಕಲಿಸಲು ಆರಂಭಿಸಿದರೆ ಖುಷಿಯಾಗಿ ಕಲಿಯುತ್ತಾರೆ‘ ಎನ್ನುವ ಅನುಭವ ಎಚ್‌.ಡಿ.ಕೋಟೆ ತಾಲ್ಲೂಕಿನ ಬಸವನಗಿರಿ ಹಾಡಿ ಆಶ್ರಮಶಾಲೆಯ ಶಿಕ್ಷಕ ಕುಮಾರ್ ಅವರದ್ದು.

10ನೇ ತರಗತಿಯಲ್ಲಿದ್ದಾಗಲೂ ಮಗ್ಗಿ ಬರುತ್ತಿರಲಿಲ್ಲ ಎನ್ನುವ ನೋವು ಕಮ್ಮಟದಲ್ಲಿರುವ ವಿನು ಅವರದ್ದು. ಪಿರಿಯಾಪಟ್ಟಣ ತಾಲ್ಲೂಕಿನ ರಾಣಿಗೇಲ್‌ ಹಾಡಿಯ ಮುತ್ತು ಅವರು, ‘ಆಗ ಕುರುಬ ಅಂದ್ರೆ ಬೇಸರ ಆಗ್ತಿತ್ತು. ಈಗ ನಮ್ಮ ಇನಿಷಿಯಲ್‌ ಜೆ.ಬಿ. ಅಂದರೆ ಜೇನು ಕುರುಬ ಅಂತ. ಹಾಗಂದ್ರೆ ಹೆಮ್ಮೆ ಆಗ್ತದೆ. ಅಂಗನವಾಡಿಗೆ ಹೋಗುವ ಅಣ್ಣನ ಮಗ ದಿವಿನನಿಗೆ ನಮ್ಮ ಭಾಷೆಯಲ್ಲೇ ಪುಸ್ತಕ ಬತ್ತದೆ, ತಗೊಂಡು ಬಾ ಅಂತ ಹೇಳಿಕಳಿಸಿದ್ದೆ. ಸಂಜೆ ಬಂದು ಅಯ್ಯ, ಪದಗಳು ಬಂದಿಲ್ಲ ಅಂದ. ಬತ್ತವೆ. ಹೋಗ್ತಾ ಇರು ಬಿಡಬೇಡ‘ ಎಂದಿದ್ದನ್ನು ಸ್ಮರಿಸಿದರು. ಹೀಗೆ ನಮ್ಮ ಮಕ್ಕಳಿಗೆ ನಮ್ಮ ಭಾಷೆಯಲ್ಲಿಯೇ ಕಲಿಸುವ ಪಠ್ಯವಾಗಿ ಬಂದರೆ... ಕಾಯುತ್ತಿದ್ದೇವೆ’ ಎಂದು ಹೇಳುತ್ತಾರೆ ಮುತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT