ಬೆಂಗಳೂರು: ಆರ್ಥಿಕವಾಗಿ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಯುಪಿಎಸ್ಸಿ (ಐಎಎಸ್) ಪರೀಕ್ಷೆಗೆ ತರಬೇತಿ ನೀಡಲು ಎರಡನೇ ವರ್ಷದ ‘ಯುಪಿಎಸ್ಸಿ ವಿದ್ಯಾರ್ಥಿವೇತನ ಯೋಜನೆ’ಯನ್ನು ಪ್ರಮೋದ್ ಶ್ರೀನಿವಾಸ್ ನೇತೃತ್ವದ ರಾಷ್ಟ್ರೀಯ ಯುವ ಪ್ರತಿಷ್ಠಾನ (ಆರ್ವೈಪಿ) ಘೋಷಿಸಿದೆ.
ವಿದ್ಯಾರ್ಥಿ ವೇತನ ಪಡೆಯಲು ಅರ್ಹತಾ ಪರೀಕ್ಷೆ ತೇರ್ಗಡೆಯಾಗಬೇಕಿದ್ದು, ಈ ಪರೀಕ್ಷೆ ಬೆಂಗಳೂರಿನ ಪದ್ಮನಾಭನಗರದ ಸಹಕಾರಿ ವಿದ್ಯಾ ಕೇಂದ್ರದ ಮೈದಾನದಲ್ಲಿ ಇದೇ 24ರಂದು ನಡೆಯಲಿದೆ.
‘ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ತೀವ್ರ ಬಡತನದಲ್ಲಿರುವ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ಮೂಲಕ, ಮಾನಸಿಕ ಒತ್ತಡವನ್ನು ದೂರ ಮಾಡುವುದು ಸಂಸ್ಥೆಯ ಗುರಿ. ಎಷ್ಟೇ ಪ್ರತಿಭಾವಂತರಾಗಿದ್ದರೂ ಹಣಕಾಸಿನ ಒತ್ತಡ ಎದುರಾದಾಗ ಪರೀಕ್ಷೆಗೆ ಪೂರ್ಣ ಪ್ರಮಾಣದಲ್ಲಿ ಸಜ್ಜಾಗಿ ಎದುರಿಸುವುದು ಕಷ್ಟಸಾಧ್ಯ. ಅಂಥ ಅಭ್ಯರ್ಥಿಗಳು ತಮ್ಮ ಗಮನ ಸಂಪೂರ್ಣವಾಗಿ ಕಲಿಕೆಯತ್ತ ನೀಡಲು ಸಾಧ್ಯವಾಗಬೇಕೆಂಬ ಸದುದ್ದೇಶದಿಂದ ಈ ಯೋಜನೆ ಆರಂಭಿಸಿದ್ದೇವೆ’ ಎಂದು ಪ್ರಮೋದ್ ಶ್ರೀನಿವಾಸ್ ಹೇಳಿದರು.
‘ಮೊದಲ ವರ್ಷ 15 ಅಭ್ಯರ್ಥಿಗಳ ಯುಪಿಎಸ್ಸಿ ಪರೀಕ್ಷಾ ತಯಾರಿ ವೆಚ್ಚವನ್ನು ವಿದ್ಯಾರ್ಥಿ ವೇತನ ನೀಡುವ ಮೂಲಕ ಸಂಸ್ಥೆ ಭರಿಸಿದೆ. ಎರಡನೇ ವರ್ಷ ಇನ್ನೂ ಹೆಚ್ಚಿನ ಅಭ್ಯರ್ಥಿಗಳಿಗೆ ನೆರವಾಗುವುದು ನಮ್ಮ ಉದ್ದೇಶ. ಪದವಿಯಲ್ಲಿ ಗಳಿಸಿದ ಅಂಕ, ಆರ್ಥಿಕ ಸ್ಥಿತಿ ಮತ್ತು ಸಂಸ್ಥೆ ನಡೆಸುವ ಪ್ರವೇಶ ಪರೀಕ್ಷೆಯಲ್ಲಿ ಗಳಿಸಿದ ಅಂಕದ ಆಧಾರದಲ್ಲಿ ಯುಪಿಎಸ್ಸಿ ವಿದ್ಯಾರ್ಥಿವೇತನ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ 8147315515 ಸಂಖ್ಯೆಯನ್ನು ಸಂಪರ್ಕಿಸಬಹುದು’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.