ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

24ರಂದು ಘಟಿಕೋತ್ಸವ: ಮೂವರಿಗೆ ವಿಟಿಯು ಗೌರವ ಡಾಕ್ಟರೇಟ್‌

24ರಂದು ಘಟಿಕೋತ್ಸವ, 62,228 ವಿದ್ಯಾರ್ಥಿಗಳಿಗೆ ಪದವಿ, 701 ಮಂದಿಗೆ ಪಿಎಚ್‌ಡಿ: ಪ್ರೊ.ವಿದ್ಯಾಶಂಕರ
Last Updated 20 ಫೆಬ್ರುವರಿ 2023, 21:46 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 22ನೇ ಘಟಿಕೋತ್ಸವ ಫೆ. 24ರಂದು ಬೆಳಿಗ್ಗೆ 10.30ಕ್ಕೆ ಜ್ಞಾನಸಂಗಮ ಆವರಣದಲ್ಲಿರುವ ಡಾ.ಎ.ಪಿ.ಜೆ ಅಬ್ದುಲ್‌ ಕಲಾಂ ಸಭಾಂಗಣದಲ್ಲಿ ನಡೆಯಲಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್‌.ವಿದ್ಯಾಶಂಕರ ತಿಳಿಸಿದರು.

‘ಔದ್ಯೋಗಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮೂವರಿಗೆ ಗೌರವ ಡಾಕ್ಟರೇಟ್‌ ನೀಡಲಾಗುತ್ತಿದೆ. ಟೊಯೊಟಾ ಕಿರ್ಲೋಸ್ಕರ್‌ ಮೋಟಾರ್ಸ್‌ನ ಉಪಾಧ್ಯಕ್ಷ ವಿಕ್ರಮ್‌ ಕಿರ್ಲೋಸ್ಕರ್‌ (ಮರಣೋತ್ತರ), ವೆಬ್ಕೊ ಇಂಡಿಯಾ ಲಿಮಿಟೆಡ್‌ ಹಾಗೂ ಟಿವಿಎಸ್‌ ಆಟೊಮೆಟಿವ್‌ ಸಲ್ಯೂಷನ್ಸ್‌ನ ಪ್ರೈವೇಟ್‌ ಲಿಮಿಟೆಡ್‌ ಅಧ್ಯಕ್ಷ ಎಂ.ಲಕ್ಷ್ಮೀನಾರಾಯಣ್‌, ಬೆಲಗಮ್‌ ಫೆರೊಕಾಸ್ಟ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ವ್ಯವಸ್ಥಾಪಕ ನಿರ್ದೇಶಕ ಸಚಿನ್‌ ಸಬ್ನಿಸ್‌ ಡಾಕ್ಟರೇಟ್‌ ಪಡೆಯಲಿದ್ದಾರೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ‘ಒಟ್ಟು 62,228 ವಿದ್ಯಾರ್ಥಿಗಳಿಗೆ ವಿವಿಧ ಪದವಿ ಹಾಗೂ 701 ಮಂದಿಗೆ ಪಿಎಚ್‌.ಡಿ ಪ್ರದಾನ ಮಾಡಲಾಗುವುದು. ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅಧ್ಯಕ್ಷತೆ ವಹಿಸುವರು. ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತಿನ ಅಧ್ಯಕ್ಷ ಪ್ರೊ.ಟಿ.ಜಿ. ಸೀತಾರಾಮ್‌ ಘಟಿಕೋತ್ಸವ ಭಾಷಣ ಮಾಡುವರು’ ಎಂದರು.

‘ವಿಶ್ವದ ಬೇರೆಬೇರೆ ಕಡೆಯ ಅವಕಾಶಗಳು ನಮ್ಮ ಪದವೀಧರರ ಕೈ ತಪ್ಪಬಾರದು ಎಂಬ ಕಾರಣಕ್ಕೆ, ವಿಟಿಯು ಶೈಕ್ಷಣಿಕ ಕ್ಯಾಲೆಂಡರ್‌ ಹೊಂದಾಣಿಕೆ ಮಾಡಲು ನಿರ್ಧರಿಸಲಾಗಿದೆ. ವಿಶ್ವದ ಪ್ರಮುಖ ವಿಶ್ವವಿದ್ಯಾಲಯಗಳು ಹಾಗೂ ಎಐಸಿಟಿಇ ಜತೆಗೆ ಚರ್ಚಿಸಿ ‘ಅಕಾಡೆಮಿಕ್‌ ಕ್ಯಾಲೆಂಡರ್‌’ ಬದಲಾವಣೆ ಮಾಡಲಿದ್ದೇವೆ’ ಎಂದರು.

ಮುರಳಿಗೆ 18 ಚಿನ್ನದ ಪದಕ!

ಬೆಂಗಳೂರಿನ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ವಿದ್ಯಾರ್ಥಿ ಎಸ್‌.ಮುರಳಿ ಒಟ್ಟು 18 ಚಿನ್ನದ ಪದಕ ಪಡೆದಿದ್ದಾರೆ. ಒಬ್ಬನೇ ವಿದ್ಯಾರ್ಥಿ ಇಷ್ಟು ಪದಕ ಪಡೆದಿದ್ದು ವಿಟಿಯು 25 ವರ್ಷಗಳ ಇತಿಹಾಸದಲ್ಲೇ ದಾಖಲೆ ಎಂದು ಪ್ರೊ.ವಿದ್ಯಾಶಂಕರ ತಿಳಿಸಿದರು.

ಅನುತ್ತೀರ್ಣರಿಗೆ ಸುವರ್ಣಾವಕಾಶ’

‘ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಈ ಬಾರಿ ಬೆಳ್ಳಿಹಬ್ಬ ಆಚರಿಸಿಕೊಳ್ಳುತ್ತಿದೆ. ಇದರ ಅಂಗವಾಗಿ ಪದವಿ ಅಪೂರ್ಣವಾದವರಿಗೆ ‘ಸುವರ್ಣ ಅವಕಾಶ’ ನೀಡಲಾಗುತ್ತಿದೆ. ಎಷ್ಟೇ ವರ್ಷಗಳ ಹಿಂದೆ, ಎಷ್ಟೇ ವಿಷಯಗಳು ಅಪೂರ್ಣ ಆಗಿದ್ದರೂ ಈಗ ಮತ್ತೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತಿದೆ’ ಎಂದು ಪ್ರೊ.ವಿದ್ಯಾಶಂಕರ ಎಂದರು.

‘ಫೆಬ್ರುವರಿ ಅಂತ್ಯದಲ್ಲೇ ಇದರ ಎಲ್ಲ ವಿವರಗಳನ್ನು ಜಾಲತಾಣದಲ್ಲಿ ನೀಡಲಾಗುವುದು. 9,159 ಬಿಇ ವಿದ್ಯಾರ್ಥಿಗಳು, 1,247 ಎಂ.ಟೆಕ್‌ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಪದವಿಗಳ ಒಟ್ಟು 13,329 ಮಂದಿ ತಮ್ಮ ಪದವಿ ಅಪೂರ್ಣ ಮಾಡಿದ್ದಾರೆ. ಇವರಿಗಾಗಿ ವಿಶೇಷ ಪರೀಕ್ಷೆ ನಡೆಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT