ಲಂಡನ್: ಬಾಲಕಿಯರ ಶಿಕ್ಷಣಕ್ಕೆ ಉತ್ತೇಜನ ಮತ್ತು ಭಾರತದಲ್ಲಿ ಕ್ವಿಕ್ ರೆಸ್ಪಾನ್ಸ್(QR)ಕೋಡ್ ಪಠ್ಯಪುಸ್ತಕದ ಕ್ರಾಂತಿ ಮಾಡಿದ್ದಾಗಿ ಭಾರತ ಮೂಲದ ಪ್ರಾಥಮಿಕ ಶಾಲೆಯ ಶಿಕ್ಷಕರಿಗೆ 7.3 ಕೋಟಿ ರೂ. ಮೊತ್ತದ ವಾರ್ಷಿಕ ಜಾಗತಿಕ ಶಿಕ್ಷಕ ಪ್ರಶಸ್ತಿ ಲಭಿಸಿದೆ.
ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಪರಿತೆವಡಿ ಗ್ರಾಮದ 32 ವರ್ಷದ ರಂಜೀತ್ ಸಿಂಹದಿಸಾಳೆ ಅವರಿಗೆ ಈ ಗೌರವ ಸಿಕ್ಕಿದೆ. ಅಂತಿಮ ಸುತ್ತಿನಲ್ಲಿದ್ದ 10 ಶಿಕ್ಷಕರ ಪೈಕಿ ದಿಸಾಳೆ ಆಯ್ಕೆಯಾಗಿದ್ದಾರೆ. ಜಾಗತಿಕವಾಗಿ ತಮ್ಮ ವೃತ್ತಿಯಲ್ಲಿ ಅಸಾಧಾರಣ ಸೇವೆ ಸಲ್ಲಿಸುವ ಶಿಕ್ಷಕರನ್ನ ಗುರುತಿಸಿ ಗೌರವಿಸುವ ದೃಷ್ಟಿಯಿಂದ 2014ರಲ್ಲಿ ಲಂಡನ್ನಿನ ವರ್ಕಿ ಫೌಂಡೇಶನ್, ಜಾಗತಿಕ ವಾರ್ಷಿಕ ಪ್ರಶಸ್ತಿಯನ್ನು ಆರಂಭಿಸಿತು.
ಶಿಕ್ಷಕರೇ ನಿಜವಾದ ಬದಲಾವಣೆ ಮಾಡುವವರು ಎಂದು ನಂಬಿರುವ ಪ್ರಶಸ್ತಿ ವಿಜೇತ ದಿಸಾಳೆ ಅವರು, ತಾವು ಪಡೆದ ಪ್ರಶಸ್ತಿ ಮೊತ್ತದಲ್ಲಿ ಶೇ. 50ರಷ್ಟನ್ನು ತಮ್ಮ ಜೊತೆ ಅಂತಿಮ ಸುತ್ತಿಗೆ ಬಂದಿದ್ದ ಶಿಕ್ಷಕರಿಗೆ ನೀಡುವ ಮೂಲಕ ಅವರ ಅಸಾಧಾರಣ ಶಿಕ್ಷಣ ಸೇವೆಗೆ ನೆರವಾಗಲು ನಿರ್ಧರಿಸಿದ್ದಾರೆ.
ಕೋವಿಡ್ 19 ಸಂಕಷ್ಟದ ಸಂದರ್ಭದಲ್ಲಿ ಜಾಗತಿಕವಾಗಿ ಶಿಕ್ಷಣ ವ್ಯವಸ್ಥೆ ಸಂಕಷ್ಟಕ್ಕೆ ಸಿಲುಕಿದೆ. ಇಂತಹ ಕಷ್ಟದ ದಿನಗಳಲ್ಲಿ ಮಕ್ಕಳುತಮ್ಮ ಹುಟ್ಟಿನಿಂದಲೇ ಪಡೆದ ಶಿಕ್ಷಣದ ಹಕ್ಕನ್ನು ಒದಗಿಸಲು ಶಿಕ್ಷಕರು ಶ್ರಮಪಟ್ಟಿದ್ದಾರೆ ಎಂದು ದಿಸಾಳೆ ಅಭಿಪ್ರಾಯಪಟ್ಟಿದ್ದಾರೆ.
“ಶಿಕ್ಷಕರು ಸೀಮೆಸುಣ್ಣ ಮತ್ತು ಸವಾಲುಗಳ ಜೊತೆ ತಮ್ಮ ವಿದ್ಯಾರ್ಥಿಗಳ ಜೀವನವನ್ನುಬದಲಿಸಬಲ್ಲವರಾಗಿದ್ದಾರೆ. ಅವರು ಯಾವಾಗಲೂ ಕೊಡುವುದು ಮತ್ತು ಹಂಚುವುದರಲ್ಲಿ ನಂಬಿಕೆ ಇಟ್ಟಿರುತ್ತಾರೆ. ಹೀಗಾಗಿ, ನನ್ನ ಜೊತೆ ಅಂತಿಮ ಸುತ್ತಿಗೆ ಬಂದಿದ್ದ ಶಿಕ್ಷಕರಿಗೆ ಅವರ ಅಸಾಧಾರಣ ಕೆಲಸ ಮುಂದುವರಿಸಲು, ನಾನು ಗೆದ್ದ ಪ್ರಶಸ್ತಿ ಮೊತ್ತದಲ್ಲಿ ಶೇ.50 ರಷ್ಟನ್ನು ಸಮನಾಗಿ ಹಂಚಿಕೆ ಮಾಡುತ್ತಿರುವುದಕ್ಕೆ ಬಹಳ ಸಂತಸವಾಗುತ್ತಿದೆ. ನಾವೆೆಲ್ಲರೂ ಒಂದಾಗಿ ಈ ಜಗತ್ತನ್ನ ಬದಲಿಸುವ ನಂಬಿಕೆ ನನಗಿದೆ. ಏಕೆಂದರೆ, ಹಂಚುವುದೆಂದರೆ, ಬೆಳೆಯುವುದು” ಎಂದು ದಿಸಾಳೆ ಹೇಳಿದ್ದಾರೆ.
ದಿಸಾಳೆ ಅವರ ಉದಾರತೆಯಿಂದಾಗಿ ಅಂತಿಮ ಸುತ್ತಿಗೆ ಬಂದಿದ್ದ ಎಲ್ಲ ಶಿಕ್ಷಕರು ತಲಾ 36 ಲಕ್ಷ ರೂಪಾಯಿ ಪಡೆಯಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.