ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಯಿಂದ ಡಿಗ್ರಿವರೆಗೆ ‘ನೈಸ್’ ಸ್ಕಾಲರ್‌ಶಿಪ್

ರಾಷ್ಟ್ರೀಯ ವಿದ್ಯಾರ್ಥಿ ವೇತನ ಪರೀಕ್ಷೆ–2019 l 5ನೇ ತರಗತಿಯಿಂದ ಪದವಿ ವಿದ್ಯಾರ್ಥಿಗಳಿಗೆ ನೆರವು
Last Updated 20 ಆಗಸ್ಟ್ 2019, 18:45 IST
ಅಕ್ಷರ ಗಾತ್ರ

ಔಪಚಾರಿಕ ಕಲಿಕೆಯಲ್ಲಿ ಶಾಲಾ–ಕಾಲೇಜುಗಳದ್ದು ಮಹತ್ವದ ಪಾತ್ರ. ಆದರೂ ತರಗತಿಯ ಪಾಠದಲ್ಲಿ ಒಂದಷ್ಟು ಸಂಗತಿಗಳು ಮಕ್ಕಳ ಗ್ರಹಿಕೆಗೆ ನಿಲುಕದೇ ಹೋಗಬಹುದು. ಮಕ್ಕಳಲ್ಲಿನ ವೈಯಕ್ತಿಕ ಭಿನ್ನತೆ ಮುಖ್ಯವಾಗಿ ಅವರ ಆಸಕ್ತಿ- ಕುತೂಹಲ, ಅಭಿಪ್ರೇರಣೆ, ಮಾನಸಿಕ ಸಿದ್ಧತೆ, ಆರೋಗ್ಯ ಇವೆಲ್ಲಾ ಕಲಿಕೆಯಲ್ಲಿ ಪ್ರಭಾವ ಬೀರುವ ಅಂಶಗಳು. ಕೆಲವು ವಿದ್ಯಾರ್ಥಿಗಳು ಶಿಕ್ಷಕರು ನೀಡುವ ಒಂದೇ ವಿವರಣೆಯಲ್ಲಿ ಅರ್ಥೈಸಿಕೊಂಡರೆ, ಕೆಲವರಿಗೆ ಎರಡು-ಮೂರು ಬಾರಿಯ ಪುನರಾವರ್ತನೆ ಬೇಕು. ಮತ್ತೆ ಕೆಲವರಿಗೆ ಬರೆದು ಕಲಿತ ಮೇಲೆಯೇ ಪರಿಕಲ್ಪನೆ ಸ್ಪಷ್ಟಗೊಳ್ಳುತ್ತದೆ. ಇನ್ನು ಕೆಲವರಿಗಂತೂ ಅರ್ಥವಾಗದೇ ಉಳಿದ ಅರ್ಧಂಬರ್ಧ ಭಾಗವು ಪೂರ್ಣಗೊಳ್ಳುವುದು ಮನೆಯ ಓದಿನಲ್ಲಿ ಮಾತ್ರ. ಹೀಗಾಗಿ, ಅಂದಿನ ಪಾಠವನ್ನು ಅಂದೇ ಮನನ ಮಾಡಿಕೊಂಡಲ್ಲಿ ಕಲಿಕಾಂಶಗಳು ಮೆದುಳಿನಲ್ಲಿ ಗಟ್ಟಿಗೊಳ್ಳುವುದಲ್ಲದೆ ದೀರ್ಘಸ್ಮೃತಿಯಲ್ಲಿಯೂ ದಾಖಲಾಗುತ್ತದೆ.

ಯಾವಾಗಲೂ ಮಕ್ಕಳಿಗೆ ಪಾಠದಲ್ಲಿ ಅರ್ಥವಾಗದ ಮತ್ತು ಅಸ್ಪಷ್ಟ ಸಂಗತಿಗಳು ಕಲಿಕೆಯಿಂದ ದೂರವೇ ಉಳಿದುಬಿಡುತ್ತವೆ. ಅರ್ಥವಾಗದ ಸಂಗತಿಗಳನ್ನು ಯಾರಿಂದಲೂ ಶಾಶ್ವತ ಸ್ಮೃತಿಯನ್ನಾಗಿ ಹಿಡಿದಿಡುವುದು ಸಾಧ್ಯವಿಲ್ಲ. ಆಗೆಲ್ಲಾ ವಿದ್ಯಾರ್ಥಿಗಳು ತಮ್ಮ ಶಿಕ್ಷಕರನ್ನು ಸಂಪರ್ಕಿಸಿ, ಚರ್ಚಿಸಿ ಅರ್ಥವಾಗದ ವಿವರಣೆ, ಕಲಿಕಾ ಹಂತ, ಪರಿಕಲ್ಪನೆಗಳನ್ನು ಪರಿಹರಿಸಿಕೊಳ್ಳಬೇಕಾಗುತ್ತದೆ. ಕೆಲವೊಮ್ಮೆ ಶಿಕ್ಷಕರನ್ನು ಪದೇ ಪದೇ ಭೇಟಿ ಮಾಡಲು ವಿದ್ಯಾರ್ಥಿಗಳು ಹಿಂಜರಿಯುವುದಿದೆ. ಅಂತಹ ಸಂದರ್ಭದಲ್ಲಿ ವಿಷಯವನ್ನು ಅರ್ಥೈಸಿಕೊಳ್ಳಲು ತೋರುವ ಅತ್ಯುತ್ತಮ ಮಾದರಿಯೆಂದರೆ ಗುಂಪು ಅಧ್ಯಯನ.

ಗುಂಪು ಮುಖ್ಯವಾಗಿ ವಿವಿಧ ಹಂತದ ಕಲಿಕಾ ಸಾಮರ್ಥ್ಯವುಳ್ಳ ಮಕ್ಕಳನ್ನು ಒಳಗೊಂಡಿರಬೇಕು. ಒಂದು ಉದ್ದೇಶ ಸಾಧನೆಗಾಗಿ ತುಡಿಯುವ ಮನಸ್ಸುಳ್ಳವರು ಅಲ್ಲಿರಬೇಕು. ಯಾವುದೇ ಹೆಚ್ಚುಗಾರಿಕೆಗೆ ಅವಕಾಶವಿಲ್ಲದಂತೆ ಸಮಾನ ಅವಕಾಶ, ಹೊಣೆಗಾರಿಕೆಯ ಆಧಾರದಲ್ಲಿ ನಿರ್ದಿಷ್ಟ ಸಂಖ್ಯೆಯ ತಂಡವನ್ನು ರಚಿಸಬೇಕು. ಒಬ್ಬ ಗುಂಪಿನ ನಾಯಕನಾದರೂ ಸಾಮೂಹಿಕ ಜವಾಬ್ದಾರಿ ಅಪೇಕ್ಷಣೀಯ. ಗುಂಪು ಅಧ್ಯಯನ ಮತ್ತು ಗುಂಪು ಚರ್ಚೆಗಳು ಕೇವಲ ಶಾಲಾಹಂತಕ್ಕೆ ಸೀಮಿತವಲ್ಲ. ವೃತ್ತಿಶಿಕ್ಷಣ ಮತ್ತು ತರಬೇತಿ ಶಾಖೆಗಳಲ್ಲಿಯೂ ನಿಗದಿತ ಸಮಸ್ಯೆ, ಸವಾಲು, ಸಂಕಷ್ಟಗಳಿಗೊಂದು ಪರಿಹಾರವನ್ನು ಗುಂಪು ಚರ್ಚೆಯಲ್ಲಿ ಕಂಡುಕೊಳ್ಳಬಹುದು. ವಿಸ್ತೃತ ಸಮಾಲೋಚನೆ ಮತ್ತು ಚರ್ಚೆಗಳ ತರುವಾಯ ಒಮ್ಮತದ ಅಭಿಪ್ರಾಯ ಪಡೆದು ವಿಚಾರ ಮಂಡನೆ ನಿರ್ವಹಿಸುವುದು ಹೆಚ್ಚು ಫಲದಾಯಕ..

ಗುಂಪು ಅಧ್ಯಯನವು ಸಂಪೂರ್ಣ ಶಿಶುಕೇಂದ್ರಿತ. ಅಲ್ಲೊಂದು ಅವ್ಯಕ್ತ ಸ್ವಾತಂತ್ರ್ಯವಿರುತ್ತದೆ. ಆತ್ಮೀಯ ಪರಿಸರದಲ್ಲಿ ಹಿತಕರ ಕಲಿಕಾನುಭವ ಸುಲಭ ಸಾಧ್ಯವಾಗುತ್ತದೆ. ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸುವುದರೊಟ್ಟಿಗೆ ಕಲಿಕೆಯಲ್ಲಿ ಸಹಸದಸ್ಯರ ಶಕ್ತಿ-ದೌರ್ಬಲ್ಯಗಳ ಅರಿವು ದಕ್ಕುವುದಲ್ಲದೆ ತಕ್ಷಣದ ಫಲಿತಾಂಶ ಸಾಧ್ಯವಾಗುತ್ತದೆ. ಆಲಿಸುವ, ಆಲೋಚಿಸುವ, ಚಿಂತಿಸುವ ಸಾಮರ್ಥ್ಯ ವೃದ್ಧಿಸುತ್ತದೆ. ಸಂವಹನ ಕೌಶಲಗಳು ಬೆಳೆಯುತ್ತದೆ. ಗುಂಪಿನಲ್ಲಿ ಹಿಂಜರಿಕೆ, ಅಂಜಿಕೆ, ಅಳುಕುಗಳು ದೂರವಾಗಿ ಒತ್ತಡರಹಿತ ಸ್ಥಿತಿಯಲ್ಲಿ ಕಲಿಯುವುದು ಸಾಧ್ಯವಾಗುತ್ತದೆ. ನಿರ್ದಿಷ್ಟ ಗುರಿ, ಯೋಜನೆಗಳೊಂದಿಗೆ ರೂಪುಗೊಂಡ ಗುಂಪುಗಳಲ್ಲಿ ನಿತ್ಯದ ಪಾಠದಲ್ಲಿನ ಬಹುತೇಕ ಗೊಂದಲಗಳು ಬಗೆಹರಿಯುತ್ತವೆ. ಎಲ್ಲರೊಟ್ಟಿಗಿನ ಚರ್ಚೆಯಲ್ಲಿ ಪಠ್ಯವಸ್ತುವಿಗೆ ಸಂಬಂಧಿಸಿದಂತೆ ಒಬ್ಬೊಬ್ಬರೂ ಒಂದೊಂದು ಗೊತ್ತಿರುವ ಅಂಶಗಳನ್ನು ಚರ್ಚಿಸುತ್ತಾ, ಅರ್ಥೈಸಿಕೊಳ್ಳುವ ಸುಲಭ ಮಾರ್ಗವನ್ನು ವಿನಿಮಯ ಮಾಡುತ್ತಾ, ಸ್ವತಃ ತಾವೂ ಸ್ಪಷ್ಟಗೊಳ್ಳುತ್ತಾ, ಬೇರೆಯವರಿಗೂ ತಮ್ಮ ಅರಿವನ್ನು ಸುಲಭವಾಗಿ ದಾಟಿಸುತ್ತಾರೆ.

ಗುಂಪಿನ ಕಾರ್ಯವೈಖರಿಯ ಬಗ್ಗೆ ಸದಾ ಜಾಗರೂಕರಾಗಿರಬೇಕು. ಸದಸ್ಯರಲ್ಲಿ ಸ್ಪಷ್ಟ ಗುರಿ, ಬದ್ಧತೆ ಮತ್ತು ಕ್ರಿಯಾಶೀಲತೆ ಇರದಿದ್ದಲ್ಲಿ ಗುಂಪಿನ ಚಟುವಟಿಕೆಗಳು ಅನರ್ಥವಾಗುವುದು ಮಾತ್ರವಲ್ಲ ಗುಂಪು ರಚನೆಯ ಉದ್ದೇಶವೇ ಈಡೇರದೆ ಕೇವಲ ಗದ್ದಲ, ಕಾಲಹರಣಕ್ಕೆ ಸೀಮಿತಗೊಳ್ಳುವ ಅಪಾಯವಿದೆ. ಶಿವರಾಮ ಕಾರಂತರು ಹೇಳಿದಂತೆ ಮನಸು ಅರಳುವುದು ಏಕಾಂತದಲ್ಲಿಯೇ ಹೊರತು ಸಂತೆಯಲಲ್ಲ. ಹಾಗೆಯೇ ಅರಳಿದ ಮನಸ್ಸಿನ ಅನಾವರಣವು ಸಮಾನ ಆಸಕ್ತರ ಗುಂಪಿನಲ್ಲಿ ನೆರವೇರುತ್ತದೆ.

(ಉಪನ್ಯಾಸಕರು, ಸರ್ಕಾರಿ ಪದವಿಪೂರ್ವ ಕಾಲೇಜು ಹೆಬ್ರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT