ಹಿರೇಬಾಗೇವಾಡಿ: ‘ಬೊಮ್ಮಾಯಿ ಲಿಂಗಾಯತರಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ. ಹಾಗಾದರೆ, ರಾಹುಲ್ ಗಾಂಧಿ– ಸುರ್ಜೇವಾಲಾ ಲಿಂಗಾಯತರಾ?’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು.
ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾಗೇಶ ಮನ್ನೋಳಕರ ಪರ ಮಂಗಳವಾರ ಹಿರೇಬಾಗೇವಾಡಿಯಲ್ಲಿ ಪ್ರಚಾರ ನಡೆಸಿ ಮಾತನಾಡಿದ ಅವರು, ‘ಒಮ್ಮೆ ಧರ್ಮ ಒಡೆಯುವ ಹುನ್ನಾರ ನಡೆಸಿ ಪೆಟ್ಟು ತಿಂದಿದ್ದಾರೆ. ಆದರೂ ಈ ಕಾಂಗ್ರೆಸ್ಸಿಗರಿಗೆ ಬುದ್ಧಿ ಬಂದಿಲ್ಲ. ನೀವು ನಮ್ಮ ಸ್ವಾಭಿಮಾನ ಕೆಣಕಿದ್ದೀರಿ. ಎಚ್ಚರ, ಅದು ಜ್ವಾಲೆಯಾಗಿ ನಿಮ್ಮ ವಿರುದ್ಧ ಬರಲಿದೆ’ ಎಂದರು.
‘ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಜನ ಬದಲಾವಣೆ ಬಯಸಿದ್ದಾರೆ. ನಾಗೇಶ ಮನ್ನೋಳಕರ ಪರ ರಮೇಶ ಜಾರಕಿಹೊಳಿ ಕೂಡ ನಿಂತಿದ್ದಾರೆ. ಅವರ ಪ್ರತಿಜ್ಞೆ ಎಂದೂ ತಪ್ಪಿಲ್ಲ. ಅದರಲ್ಲೂ ಮಾಜಿ ಶಾಸಕ ಸಂಜಯ ಪಾಟೀಲ ಭಾಷಣ ಕೇಳುವುದೇ ರೋಮಾಂಚಕ’ ಎಂದರು.
‘ರಮೇಶ ಜಾರಕಿಹೊಳಿಯದ್ದು ವಿಚಿತ್ರ ರಾಜಕೀಯ ಜೀವನ. 25 ವರ್ಷಗಳು ಶಾಸಕರಾಗಿದ್ದರೂ ಸಚಿವರಾಗಿದ್ದು ಎರಡೇ ವರ್ಷ. ಉಳಿದ ಜೀವನವನ್ನು ಅವರನ್ನು ಶಾಸಕ ಮಾಡಿದೆ, ಇವರನ್ನು ಗೆಲ್ಲಿಸಿದೆ ಎಂದೇ ಓಡಾಡಿದ್ದಾರೆ. ಇದರಿಂದ ಜಿಲ್ಲೆಯ ಜನರ ವಿಶ್ವಾಸ ಗೆದ್ದಿದ್ದಾರೆ’ ಎಂದರು