ಕೇರಳದ ಪ್ರತಿಷ್ಠಿತ ಕ್ಷೇತ್ರಗಳಲ್ಲೊಂದಾದ ವಡಗರ ಲೋಕಸಭಾ ಕ್ಷೇತ್ರವು ಈ ಬಾರಿ ಕದನ ಕಲಿಗಳ ಹಣಾಹಣಿಗೆ ಸಾಕ್ಷಿಯಾಗಲಿದೆ. ಆಡಳಿತಾರೂಢ ಎಲ್ಡಿಎಫ್ ಮೈತ್ರಿಕೂಟವು ಸಿಪಿಎಂನ ಕೆ.ಕೆ. ಶೈಲಜಾ ಟೀಚರ್ ಅವರನ್ನು ಕಣಕ್ಕಿಳಿಸಿದರೆ, ಯುಡಿಎಫ್ ಮೈತ್ರಿಕೂಟವು ಕಾಂಗ್ರೆಸ್ನ ಶಾಫಿ ಪರಂಬಿಲ್ ಅವರನ್ನು ಪ್ರತಿಸ್ಪರ್ಧಿಯಾಗಿಸಿದೆ. ಬಿಜೆಪಿಯು ಸಿ.ಆರ್. ಪ್ರಫುಲ್ ಕೃಷ್ಣನ್ ಅವರನ್ನು ಅಖಾಡಕ್ಕಿಳಿಸಿದೆ. 2019ರಲ್ಲಿ ಮಾಜಿ ಮುಖ್ಯಮಂತ್ರಿ ಕೆ.ಕರುಣಾಕರನ್ ಅವರ ಪುತ್ರ ಕೆ.ಮುರಳೀಧರನ್ ಅವರು ಕಾಂಗ್ರೆಸ್ನಿಂದ ಸ್ಪರ್ಧಿಸಿ, 84,663 ಮತಗಳ ಅಂತರದಿಂದ ಸಿಪಿಎಂನ ಪಿ. ಜಯರಾಜನ್ ಅವರನ್ನು ಪರಾಭವಗೊಳಿಸಿದ್ದರು. ಬಿಜೆಪಿಯು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಆರೋಗ್ಯ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದ ಶೈಲಜಾ ಟೀಚರ್ ಅವರು, ಕೋವಿಡ್–19 ಮತ್ತು ನಿಪಾ ಸೋಂಕಿನ ವಿರುದ್ಧದ ಹೋರಾಟದ ಚುಕ್ಕಾಣಿ ಹಿಡಿದು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರರಾಗಿದ್ದರು. ಶಾಫಿ ಪರಂಬಿಲ್ ಅವರು ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ಪಕ್ಷ ಸಂಘಟನೆಯ ಮೂಲಕ ರಾಜ್ಯಮಟ್ಟದಲ್ಲಿ ಚಿರಪರಿಚಿತರಾಗಿರುವ ಇವರು ಗೆದ್ದೇ ಗೆಲ್ಲುತ್ತಾರೆಂಬ ವಿಶ್ವಾಸ ಕಾಂಗ್ರೆಸ್ ಮುಖಂಡರದ್ದು. ಸಿಪಿಎಂನ ಭದ್ರಕೋಟೆಯಾಗಿದ್ದ ಈ ಕ್ಷೇತ್ರವು 2004ರಿಂದಲೂ ಕಾಂಗ್ರೆಸ್ ಹಿಡಿತದಲ್ಲಿದೆ. ವಡಗರದಲ್ಲಿ ಈ ಬಾರಿ ಕಾಂಗ್ರೆಸ್ ಹಾಗೂ ಸಿಪಿಎಂ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿ ನಡೆಯಲಿದೆ ಎಂದು ಚುನಾವಣಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಆಡಳಿತಾರೂಢ ಸಿಪಿಎಂ ಸರ್ಕಾರದ ಲೋಪಗಳನ್ನು ಮುಖ್ಯ ಚುನಾವಣಾ ವಿಚಾರವನ್ನಾಗಿಸಿ ಶಾಫಿ ಅವರು ಜನರ ಬಳಿಗೆ ತೆರಳುತ್ತಿದ್ದಾರೆ.