‘ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು, ಒಮ್ಮೆ ಚುನಾವಣೆಯಲ್ಲಿ ಸೋತರೆ ಅಡಿಕೆ ವ್ಯಾಪಾರವೇ ಮಾಡಬಾರದು’ ಎಂಬ ಛಲ ಇಟ್ಟುಕೊಂಡೇ ನೆರೆ ಜಿಲ್ಲೆಯ ಭೀಮಸಮುದ್ರದಿಂದ ‘ಬೆಣ್ಣೆ’ ನಗರಿ ದಾವಣಗೆರೆಗೆ ಬಂದು 1996ಕ್ಕೂ ಮೊದಲು ಇದ್ದ ‘ಚನ್ನಯ್ಯ ಒಡೆಯರ್’ ಸಾಮ್ರಾಜ್ಯ ಪತನಗೊಳಿಸಿ, ‘ಲೋಕ ಸಮರ’ದಲ್ಲಿ ಗೆಲುವು ಸಾಧಿಸಿದ್ದ ಜಿ. ಮಲ್ಲಿಕಾರ್ಜುನಪ್ಪ, ನಂತರ ಅವರ ಪುತ್ರ ಸಿದ್ದೇಶ್ವರ ಅವರು ಮೂರು ದಶಕಗಳಿಂದ ಕ್ಷೇತ್ರದಲ್ಲಿ ಕಮಲ ಬಾಡದಂತೆ ಕಾಪಾಡಿಕೊಂಡಿದ್ದಾರೆ.
ಒಡೆಯರ ಸಾಮ್ರಾಜ್ಯ ಪತನ ಮಾಡಿದ್ದ ‘ಸುಪಾರಿ’ ವ್ಯಾಪಾರಿಗಳ ಮಣಿಸಲು ‘ಕೈ’ ಪಡೆಯಿಂದ ಅಂದು ‘ಸುಪಾರಿ’ ಪಡೆದದ್ದು ಅವರ ಬೀಗರಾದ ಶಾಮನೂರು ಕುಟುಂಬ. 1998ರಲ್ಲಿ ಒಮ್ಮೆ ಮಣಿಸಿದ್ದು ಬಿಟ್ಟರೆ ಅಪ್ಪ (ಶಾಮನೂರು), ಮಗ (ಎಸ್ಎಸ್. ಮಲ್ಲಿಕಾರ್ಜುನ) ಮತ್ತೆ ಯಶಸ್ಸು ಕಾಣಲಿಲ್ಲ. ಬೀಗರನ್ನು ಮಣಿಸಲು ಬೀಗತಿಗೆ ರಣವೀಳ್ಯ ಕೊಡುವ ಕೈಪಡೆಯ ಸುಳಿವು ಅರಿತ ‘ಭೀಮ’ ಪುತ್ರ ಅವರಿಗಿಂತ ಮೊದಲೇ ಮಡದಿ ‘ಗಾಯತ್ರಿ’ಗೆ ಕಮಲ ಹಿಡಿಸಿಬಿಟ್ಟರು. ಅತ್ತ ಶಾಮನೂರು ಕುಟುಂಬದ ಸೊಸೆ ಪ್ರಭಾ ‘ಕೈ’ ಹಿಡಿದಿದ್ದಾರೆ. ಈಗ ಬೀಗತಿಯರ ಕದನ ಕುತೂಹಲಘಟ್ಟ ತಲುಪಿದೆ. ಎಲೆ, ಅಡಿಕೆ ಬದಲು ಬರೀ ಸುಣ್ಣ ಕೊಟ್ಟರೆಂದು ಮುನಿಸಿಕೊಂಡ ರೇಣುಕಾಚಾರ್ಯ, ರವೀಂದ್ರನಾಥ್, ಮಾಡಾಳು ವಂಶ ಹಾಗೂ ಅವರ ಗುರುಗಳಾದ ಯಡಿಯೂರಪ್ಪ ಅವರ ಕೃಪೆ, ಇಬ್ಬರೂ ಬೀಗರೂ ತಮ್ಮವರೇ ಎಂದು ಬೀಗುತ್ತಿರುವ ‘ಸಾದರ’ ಚಿತ್ತದ ಫಲದಿಂದ ‘ಪ್ರಭೆ’ ಅರಳುತ್ತದೋ.. ‘ಗಾಯತ್ರಿ’ ಮಂತ್ರವೇ ಮಾರ್ದನಿಸುತ್ತದೋ...