ಮಂಡ್ಯ: ನಟಿ ಸುಮಲತಾ ಶಕ್ತಿ ಪ್ರದರ್ಶನದ ಹಿನ್ನೆಲೆಯಲ್ಲಿ ಸಚಿವ ಡಿ.ಕೆ ಶಿವಕುಮಾರ್ಜಿಲ್ಲಾ ಕಾಂಗ್ರೆಸ್ ಮುಖಂಡರ ಜೊತೆ ಚರ್ಚೆ ನಡೆಸಿದ್ದಾರೆ.
ಮೈತ್ರಿ ಧರ್ಮದಂತೆ ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸಬೇಕಿದೆ. ಹೈಕಮಾಂಡ್ ತೀರ್ಮಾನದಂತೆ ನಡೆದುಕೊಳ್ಳಬೇಕಾಗಿದೆ. ಹೀಗಾಗಿ ಪಕ್ಷದ ಮುಖಂಡರು, ಕಾರ್ಯಕರ್ತರು ಸುಮಲತಾ ಪರ ಕೆಲಸ ಮಾಡಬೇಡಿ ಎಂದು ಮನವೊಲಿಸುವ ಪ್ರಯತ್ನವನ್ನು ಅವರು ಮಾಡಿದರು.
‘ಚೆಲುವರಾಯಸ್ವಾಮಿ ನಮ್ಮ ಪಕ್ಷದ ನಾಯಕ. ಹೀಗಾಗಿ ಅವರ ಜೊತೆ ಚರ್ಚೆ ಮಾಡಿದ್ದೇವೆ. ನಮ್ಮಲ್ಲಿ ಯಾವುದೇ ಅಸಮಧಾನ ಇಲ್ಲ. ಹಾಸನ, ಮಂಡ್ಯ, ರಾಮನಗರ, ಮೈಸೂರಿನಲ್ಲಿ ಕಾರ್ಯಕರ್ತರು ಗೊಂದಲ ಇದೆ. ಸಮಸ್ಯೆ ತಿಳಿ ಮಾಡಲು ನಾನು ಜವಾಬ್ದಾರಿ ತೆಗದುಕೊಂಡಿದ್ದೇನೆ’ ಎಂದು ಹೇಳಿದರು.
‘ಸುಮಲತಾ ಅಂಬರೀಶ್ ನನ್ನ ಸಹೋದರಿ. ಬೇರೆಯವರ ಒತ್ತಡದ ಮೇಲೆ ಚುನಾವಣೆಗೆ ನಿಂತಿದ್ದಾರೆ. ಕೆಲವು ನಾಯಕರ ಜೊತೆ ನಿನ್ನೆ ಚರ್ಚೆ ಮಾಡಿದ್ದೇನೆ. ಕಾಂಗ್ರೆಸ್ನಿಂದ ಟಿಕೆಟ್ ಸಿಗುತ್ತೆ ಎಂದು ಅವರ ಜೊತೆ ಕೆಲಸ ಮಾಡಿದ್ದೇವು ಎಂದು ಕೆಲ ನಾಯಕರು ಹೇಳಿದ್ದರು. ಈಗ ನಮ್ಮ ನಾಯಕರು ಯಾರು ಅವರ ಜೊತೆ ಇಲ್ಲ’ ಎಂದರು.
ಕುಮಾರಸ್ವಾಮಿ ಹೋರಾಟಗಾರರು. ರಿಸ್ಕ್ ತೆಗದುಕೊಂಡು ಪಾಲಿಟಿಕ್ಸ್ ಮಾಡುವವರು. ದೇವೇಗೌಡ ಹಾಗೂ ಕುಮಾರಸ್ವಾಮಿ ಸೇಫ್ ಪಾಲಿಟಿಕ್ಸ್ಯಾವತ್ತೂ ಮಾಡಿಲ್ಲ. ಕಷ್ಟ ಕಾಲದಲ್ಲಿ ಫೈಟ್ ಮಾಡುತ್ತಾರೆ ಎಂದು ತಿಳಿಸಿದರು.
ಎಲ್ಲ ಶಾಸಕರ ಒತ್ತಡದ ಮೇಲೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ದಾರೆ. ಅಂಬರೀಶ್ ಮೇಲೆ ಕುಮಾರಸ್ವಾಮಿಗೆ ಅಪಾರವಾದ ಗೌರವ ಇಟ್ಟುಕೊಂಡಿದ್ದರು. ಕಳೆದ ಚುನಾವಣೆಯಲ್ಲಿ ಅಂಬರೀಶ್ ನನಗೆ ಆರೋಗ್ಯ ಸರಿ ಇಲ್ಲ ಎಂದು ನಿಂತಿರಲಿಲ್ಲ ಎಂದರು.
ಪಕ್ಷ ಹೇಳಿದಂತೆ ನಾನು ಕೆಲಸ ಮಾಡುತ್ತೇನೆ. ನಾನೊಬ್ಬ ಸಾಮಾನ್ಯ ಕಾರ್ಯಕರ್ತ ಅಷ್ಟೆ ಎಂದೂ ಹೇಳಿದರು.