ಕಂಗನಾ ಅವರನ್ನು ಮಣಿಸಲು ಹಿಮಾಚಲ ಪ್ರದೇಶದ ಸಚಿವ ವಿಕ್ರಮಾದಿತ್ಯ ಸಿಂಗ್ ಅವರನ್ನು ಕಾಂಗ್ರೆಸ್ ಪಕ್ಷವು ಅಖಾಡಕ್ಕಿಳಿಸಿದೆ. ಶಿಮ್ಲಾ ಗ್ರಾಮೀಣ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ವಿಕ್ರಮಾದಿತ್ಯ ಅವರು, ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಹಾಗೂ ಕಾಂಗ್ರೆಸ್ ಹಿಮಾಚಲ ಪ್ರದೇಶ ರಾಜ್ಯ ಘಟಕದ ಅಧ್ಯಕ್ಷೆ ಪ್ರತಿಭಾ ಸಿಂಗ್ ಅವರ ಪುತ್ರರಾಗಿದ್ದಾರೆ. 2021ರಲ್ಲಿ ಈ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಪ್ರತಿಭಾ ಸಿಂಗ್ ಅವರು 8,766 ಮತಗಳ ಅಂತರದಿಂದ ಬಿಜೆಪಿಯ ಬ್ರಿಗೇಡಿಯರ್ ಕುಶಾಲ್ ಠಾಕೂರ್ ಅವರನ್ನು ಪರಾಭವಗೊಳಿಸಿದ್ದರು. ವೀರಭದ್ರ ಸಿಂಗ್ ಕೂಡ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ತಂದೆ ಹಾಗೂ ತಾಯಿಯನ್ನು ಗೆಲ್ಲಿಸಿದ್ದ ಈ ಕ್ಷೇತ್ರದ ಮತದಾರರು ಮಗನ ಕೈ ಬಿಡಲಾರರು ಎಂಬುದು ಕಾಂಗ್ರೆಸ್ ನಾಯಕರ ವಿಶ್ವಾಸವಾಗಿದೆ.