ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುನಾವಣೆಯಲ್ಲಿ ಸೋಲು: ನವೀನ್ ಪಟ್ನಾಯಕ್ ಆಪ್ತ ಪಾಂಡಿಯನ್ ರಾಜಕೀಯದಿಂದ ನಿವೃತ್ತಿ

Published 9 ಜೂನ್ 2024, 10:39 IST
Last Updated 9 ಜೂನ್ 2024, 10:39 IST
ಅಕ್ಷರ ಗಾತ್ರ

ಭುವನೇಶ್ವರ: ರಾಜಕೀಯ ಸೇರಿದ ಆರು ತಿಂಗಳು, 13 ದಿನಗಳ ನಂತರ ಮಾಜಿ ಅಧಿಕಾರಿ ವಿ.ಕೆ. ಪಾಂಡಿಯನ್ ಅವರು ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯುತ್ತಿರುವುದಾಗಿ ಭಾನುವಾರ ಪ್ರಕಟಿಸಿದ್ದಾರೆ. 

ಒಡಿಶಾ ರಾಜ್ಯವನ್ನು ತಮ್ಮ ಹೃದಯದಲ್ಲಿ, ನವೀನ್ ಪಟ್ನಾಯಕ್ ಅವರನ್ನು ಉಸಿರಿನಲ್ಲಿ ಇರಿಸಿಕೊಳ್ಳುವುದಾಗಿ ಹೇಳಿದ್ದಾರೆ. ಪಟ್ನಾಯಕ್ ಅವರಿಗೆ ನೆರವಾಗುವ ಉದ್ದೇಶದಿಂದ ಮಾತ್ರವೇ ತಾವು ರಾಜಕೀಯ ಸೇರಿದ್ದುದಾಗಿ, ಆ ಕಾರಣಕ್ಕಾಗಿಯೇ 2024ರ ಚುನಾವಣೆಯಲ್ಲಿ ಕಣಕ್ಕೆ ಇಳಿಯದೆ ಇದ್ದುದಾಗಿ ವಿಡಿಯೊ ಸಂದೇಶದಲ್ಲಿ ಅವರು ತಿಳಿಸಿದ್ದಾರೆ.

ಚುನಾವಣೆಯಲ್ಲಿ ಪಕ್ಷವು ಸೋಲು ಕಂಡಿದ್ದಕ್ಕೆ ತಾವು ಜವಾಬ್ದಾರರು ಎಂದು ಒಡಿಶಾದ ಜನ ಹಾಗೂ ಬಿಜೆಡಿ ಕಾರ್ಯಕರ್ತರು ಭಾವಿಸಿದ್ದರೆ, ಅದಕ್ಕೆ ತಾವು ಕ್ಷಮೆ ಯಾಚಿಸುವುದಾಗಿ ತಿಳಿಸಿದ್ದಾರೆ. ಪಟ್ನಾಯಕ್ ಅವರು ಸತತ ಆರನೆಯ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬರದೆ ಇದ್ದರೆ ರಾಜಕೀಯ ತೊರೆಯುವುದಾಗಿ ಪಾಂಡಿಯನ್ ಅವರು ಪ್ರಚಾರದ ಸಂದರ್ಭದಲ್ಲಿ ಹೇಳಿದ್ದರು.

‘ಐಎಎಸ್‌ನಿಂದ ನಾನು ಸ್ವಯಂ ನಿವೃತ್ತಿ ಪಡೆದೆ. ನನ್ನ ಮಾರ್ಗದರ್ಶಕ ನವೀನ್ ಪಟ್ನಾಯಕ್ ಅವರಿಗೆ ನೆರವಾಗಲು ಬಿಜೆಡಿ ಸೇರಿದೆ. ಅವರಿಗೆ ನೆರವಾಗುವುದು ಮಾತ್ರ ನನ್ನ ಉದ್ದೇಶವಾಗಿತ್ತು’ ಎಂದು ಅವರು ಹೇಳಿದ್ದಾರೆ. ಕೆಲವು ರಾಜಕೀಯ ಸಂಕಥನಗಳಿಗೆ ಸರಿಯಾದ ಸಂದರ್ಭದಲ್ಲಿ ಪ್ರತ್ಯುತ್ತರ ನೀಡಲು ತಮ್ಮಿಂದ ಆಗದೆ ಇದ್ದುದು ದೊಡ್ಡ ವೈಫಲ್ಯವಾಗಿ ಪರಿಣಮಿಸಿರಬಹುದು ಎಂದು ಅವರು ಒಪ್ಪಿಕೊಂಡಿದ್ದಾರೆ.

‘ನನಗೆ ಯಾವುದೇ ರಾಜಕೀಯ ಹುದ್ದೆಯನ್ನು ಹೊಂದುವ ಆಸೆ ಇರಲಿಲ್ಲ. ನಾನು ಅಭ್ಯರ್ಥಿಯೂ ಆಗಿರಲಿಲ್ಲ, ಬಿಜೆಡಿಯಲ್ಲಿ ಯಾವ ಹುದ್ದೆಯನ್ನೂ ಹೊಂದಿರಲಿಲ್ಲ’ ಎಂದು ಪಾಂಡಿಯನ್ ತಿಳಿಸಿದ್ದಾರೆ.

‘ನನ್ನ ಬಳಿ ಇಂದಿಗೂ ಇರುವುದು ನನ್ನ ಅಜ್ಜ–ಅಜ್ಜಿಯಿಂದ ಸಿಕ್ಕ ಆಸ್ತಿ ಮಾತ್ರ. ನಾನಾಗಲಿ, ನನ್ನ ಕುಟುಂಬದ ಸದಸ್ಯರಾಗಲಿ ಜಗತ್ತಿನ ಎಲ್ಲಿಯೂ ಬೇರೆ ಆಸ್ತಿ ಹೊಂದಿಲ್ಲ. 24 ವರ್ಷಗಳ ಹಿಂದೆ ನಾನು ಐಎಎಸ್‌ ಸೇರಿದಾಗ ನನ್ನ ಆಸ್ತಿ ವಿವರ ಏನಿತ್ತೋ ಈಗಲೂ ಅದೇ ಇದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT