ಚಂಡೀಗಢ: ದೇಶದ ಸ್ವಾತಂತ್ರ್ಯ, ಸಂವಿಧಾನ ಮತ್ತು ಪ್ರಜಾಪ್ರಭುತ್ವ ಅಪಾಯದಲ್ಲಿದ್ದು, ಅದನ್ನು ರಕ್ಷಿಸಲು ಪಂಜಾಬ್ನ ಜನರು ಮತ್ತೊಮ್ಮೆ ಮುಂಚೂಣಿಗೆ ಬರಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಭಾನುವಾರ ಕರೆ ನೀಡಿದರು.
‘ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಂಜಾಬ್ನ ಜನ ಬಹುಮುಖ್ಯ ಪಾತ್ರ ವಹಿಸಿದ್ದರು. ಹಲವಾರು ಮಂದಿ ಪ್ರಾಣ ತ್ಯಾಗ ಮಾಡಿದ್ದರು’ ಎಂದು ಸ್ಮರಿಸಿದರು.
ಫಿರೋಜ್ಪುರದಲ್ಲಿ ವ್ಯಾಪಾರಿಗಳು ಮತ್ತು ಉದ್ಯಮಿಗಳಿಗಾಗಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ‘ವಿರೋಧ ಪಕ್ಷದ ಹಲವು ಮಂದಿ ಮುಖಂಡರನ್ನು ಜೈಲಿಗೆ ಕಳುಹಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು, ಬನ್ನಿ ಚುನಾವಣೆ ಎದುರಿಸೋಣ ಎಂದಿದ್ದರು’ ಎಂದು ಕೇಜ್ರಿವಾಲ್ ಟೀಕಿಸಿದರು.
‘ಮಹಾರಾಷ್ಟ್ರದಲ್ಲಿ ಮೋದಿ ಅವರು ಎನ್ಸಿಪಿಯನ್ನು ಇಬ್ಭಾಗ ಮಾಡಿ, ಅದರ ಚಿಹ್ನೆಯನ್ನು ಕಿತ್ತುಕೊಂಡರು. ಶಿವಸೇನಾವನ್ನು ಎರಡು ಭಾಗ ಮಾಡಿ, ಅದರ ಚಿಹ್ನೆಯನ್ನೂ ಕಿತ್ತುಕೊಂಡರು. ಜಾರ್ಖಂಡ್ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಜೈಲಿಗೆ ಕಳುಹಿಸಿದರು’ ಎಂದರು.
‘ಇದೇ ರೀತಿ ಪಾಕಿಸ್ತಾನದಲ್ಲೂ ಇಮ್ರಾನ್ ಖಾನ್ ಅವರನ್ನು ಬಂಧಿಸಲಾಗಿತ್ತು. ಅವರ ಪಕ್ಷ ಮತ್ತು ಚಿಹ್ನೆಯನ್ನು ಕಸಿದುಕೊಳ್ಳಲಾಯಿತು. ಬಳಿಕ ಚುನಾವಣೆ ನಡೆಸಿ ಆಡಳಿತಾರೂಢ ಪಕ್ಷವು ಗೆದ್ದಿತು’ ಎಂದರು.