ಇಟಾನಗರ: ಬಂದ್, ಹಿಂಸಾಚಾರ ಸಂಸ್ಕೃತಿಗೆ ಕುಖ್ಯಾತಿ ಪಡೆದಿದ್ದ ಈಶಾನ್ಯ ರಾಜ್ಯಗಳು, ಕಳೆದ ಹತ್ತು ವರ್ಷಗಳ ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲಿ ಕ್ಷೀಪ್ರ ಪ್ರಗತಿ ಸಾಧಿಸುತ್ತಿವೆ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಬುಧವಾರ ಹೇಳಿದರು.
ಈಶಾನ್ಯ ರಾಜ್ಯಗಳಲ್ಲಿ ಎಪ್ರಿಲ್ 19 ರಂದು ಏಕಕಾಲಕ್ಕೆ ನಡೆಯಲಿರುವ ಲೋಕಸಭಾ ಮತ್ತು ವಿಧಾನಸಭೆ ಚುನಾವಣೆಗೆ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ಅವರು, ಪ್ರಣಾಳಿಕೆಯೂ ಉತ್ತಮ ಮೂಲಸೌಕರ್ಯ, ಮಹಿಳಾ ಸಬಲೀಕರಣ, ಉದ್ಯೋಗ ಮತ್ತು ಜವಾಬ್ದಾರಿಯುತ ಆಡಳಿತದ ಭರವಸೆಯನ್ನು ನೀಡಿದೆ ಎಂದು ಹೇಳಿದರು.
ಕೇಂದ್ರ ಬಿಜೆಪಿ ಸರ್ಕಾರವು ವಿದ್ಯುತ್, ಪ್ರವಾಸೋದ್ಯಮ, ಇಂಟರ್ನೆಟ್ ಸಂಪರ್ಕ, ಕೃಷಿ ಮತ್ತು ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಈಶಾನ್ಯ ರಾಜ್ಯಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ ಎಂದು ಅವರು ಹೇಳಿದರು.
ರಸ್ತೆ, ರೈಲ್ವೆ ಮತ್ತು ವಾಯುಮಾರ್ಗ ಕ್ಷೇತ್ರಗಳಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ರಾಜ್ಯದಲ್ಲಿ ಬಹು-ಮಾದರಿ ಸಂಪರ್ಕ ಮತ್ತು ಸಮಗ್ರ ಮೂಲಸೌಕರ್ಯ ಅಭಿವೃದ್ಧಿಯನ್ನು ಹೆಚ್ಚಿಸಲು ಬಿಜೆಪಿ ಸರ್ಕಾರವು ಮುಂದಿನ ಐದು ವರ್ಷಗಳ ಕಾಲ ಅರುಣಾಚಲ ಪ್ರದೇಶ ಗತಿ ಶಕ್ತಿ ಮಾಸ್ಟರ್ ಪ್ಲಾನ್ ಅನ್ನು ಪ್ರಾರಂಭಿಸಲಿದೆ ಎಂದು ಜೆ.ಪಿ. ನಡ್ಡಾ ತಿಳಿಸಿದರು.