ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉತ್ತರ ಪ್ರದೇಶದಲ್ಲಿ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿಯ ಎಲ್ಲರಿಗೂ ಸೋಲು: ಅಖಿಲೇಶ್

Published 24 ಮೇ 2024, 3:09 IST
Last Updated 24 ಮೇ 2024, 3:09 IST
ಅಕ್ಷರ ಗಾತ್ರ

ಪ್ರತಾಪಗಢ: ಪ್ರಧಾನಿ ನರೇಂದ್ರ ಮೋದಿ ಅವರೂ ಸೇರಿದಂತೆ ಉತ್ತರ ಪ್ರದೇಶದಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿರುವ ಎಲ್ಲ ಅಭ್ಯರ್ಥಿಗಳು ಸೋಲು ಕಾಣಲಿದ್ದಾರೆ ಎಂದು ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್‌ ಯಾದವ್‌ ಗುರುವಾರ ಹೇಳಿದ್ದಾರೆ.

ದೇಶದ 140 ಕೋಟಿ ಜನರು ಬಿಜೆಪಿಯು 400 ಕ್ಷೇತ್ರಗಳಲ್ಲಿ ಸೋಲು ಅನುಭವಿಸುವಂತೆ ಮಾಡಲಿದ್ದಾರೆ. ಅವರಿಗೆ (ಬಿಜೆಪಿಗೆ) ಉಳಿದ 143 ಕ್ಷೇತ್ರಗಳಲ್ಲಿಯೂ ಗೆಲುವು ಕಠಿಣವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರತಾಪಗಢ ಕ್ಷೇತ್ರದಲ್ಲಿ ಎಸ್‌ಪಿ ಅಭ್ಯರ್ಥಿಯಾಗಿರುವ ಎಸ್‌.ಪಿ. ಸಿಂಗ್ ಪಟೇಲ್‌ ಪರ ಪ್ರಚಾರದಲ್ಲಿ ಪಾಲ್ಗೊಂಡ ಯಾದವ್, ಆಡಳಿತ ಪಕ್ಷದ ವಿರುದ್ಧ ಜನರ ಆಕ್ರೋಶ ಏರುತ್ತಿದೆ. ಉತ್ತರ ಪ್ರದೇಶದಲ್ಲಿ ನಡೆಯಲಿರುವ 7ನೇ ಹಂತದ ಮತದಾನದ ವೇಳೆಗೆ ಅದು ವಿಪರೀತಗೊಳ್ಳಲಿದೆ ಎಂದಿದ್ದಾರೆ.

'ಬಿಜೆಪಿಯು 'ಕ್ಯೊಟೊ' ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರಗಳಲ್ಲೂ ಸೋಲಲಿದೆ ಎಂದು ಈ ಹಿಂದೆ ಹೇಳಿದ್ದೆ. ಆದರೆ, ಆ ಕ್ಷೇತ್ರವೂ ಅವರ ಕೈಜಾರುವಂತೆ ಕಾಣುತ್ತಿದೆ. ಕೇಸರಿ ಪಕ್ಷವು ಉತ್ತರ ಪ್ರದೇಶದ ಎಲ್ಲ ಕ್ಷೇತ್ರಗಳಲ್ಲಿಯೂ ಸೋಲಿನ ರುಚಿ ನೋಡಲಿದೆ' ಎಂದು ಭವಿಷ್ಯ ನುಡಿದಿದ್ದಾರೆ.

ವಾರಾಣಸಿಯನ್ನು ಜಪಾನ್‌ನ ಸುಂದರ ನಗರ ಕ್ಯೊಟೊ ರೀತಿಯಲ್ಲಿ ಅಭಿವೃದ್ಧಿಪಡಿಸುವುದಾಗಿ ಪ್ರಧಾನಿ ಮೋದಿ ಈ ಹಿಂದೆ ಹೇಳಿದ್ದರು. ಹೀಗಾಗಿ ಯಾದವ್‌ ಅವರು, ವಾರಾಣಸಿಯನ್ನು ಕ್ಯೊಟೊ ಎಂದು ಉಲ್ಲೇಖಿಸಿದ್ದಾರೆ.

'ಎರಡು ಹಂತ ಬಾಕಿ'
ಸಾರ್ವತ್ರಿಕ ಚುನಾವಣೆಗೆ 7 ಹಂತಗಳಲ್ಲಿ ಮತದಾನ ನಡೆಯುತ್ತಿದೆ. ಬಿಹಾರ, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶ ಮಾತ್ರವೇ ಎಲ್ಲಾ ಸುತ್ತಿನ ಮತದಾನಕ್ಕೆ ಸಾಕ್ಷಿಯಾಗುತ್ತಿವೆ.

ಸದ್ಯ 5 ಹಂತಗಳು ಮುಕ್ತಾಯವಾಗಿದ್ದು, ಇನ್ನೆರಡು ಹಂತಗಳು ಕ್ರಮವಾಗಿ ಮೇ 25 ಹಾಗೂ ಜೂನ್‌ 1ರಂದು ನಡೆಯಲಿವೆ. ಉತ್ತರ ಪ್ರದೇಶದ 27 ಕ್ಷೇತ್ರಗಳಿಗೆ ಮತದಾನ ಬಾಕಿ ಇದೆ.

ವಿರೋಧ ಪಕ್ಷಗಳ 'ಇಂಡಿಯಾ' ಮೈತ್ರಿಕೂಟದ ಭಾಗವಾಗಿರುವ ಎಸ್‌ಪಿ ಹಾಗೂ ಕಾಂಗ್ರೆಸ್‌, ಚುನಾವಣೆಗೂ ಮುನ್ನವೇ ಸೀಟು ಹಂಚಿಕೆ ಮಾಡಿಕೊಂಡು ಕಣಕ್ಕಿಳಿದಿವೆ. ಇಲ್ಲಿನ 80 ಕ್ಷೇತ್ರಗಳ ಪೈಕಿ ಎಸ್‌ಪಿ 63ರಲ್ಲಿ ಹಾಗೂ ಕಾಂಗ್ರೆಸ್‌ 17ರಲ್ಲಿ ಕಣಕ್ಕಿಳಿದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT