ಬಸ್ತಾರ್: ಛತ್ತೀಸಗಢದಲ್ಲಿ ಬುಡಕಟ್ಟು ಸಮುದಾಯದವರ ಹಕ್ಕುಗಳನ್ನು ರಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ವಿಫಲವಾಗಿದ್ದಾರೆ. ಆದಿವಾಸಿಗಳ ಕಲ್ಯಾಣಕ್ಕಾಗಿ ಮೋದಿ ಎಂದಾದರೂ ಬದ್ಧತೆ ತೋರಿದ್ದಾರೆಯೇ? ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೋದಿ ಅವರು ಇಂದು ಬಸ್ತಾರ್ ಜಿಲ್ಲೆಯಲ್ಲಿ ರ್ಯಾಲಿ ನಡೆಸಲಿದ್ದಾರೆ. ಹೀಗಾಗಿ, ಕಾಂಗ್ರೆಸ್ ನಾಯಕ ಟೀಕಾಪ್ರಹಾಸ ನಡೆಸಿದ್ದಾರೆ.
'ಬಸ್ತಾರ್ನಲ್ಲಿ ಬಿಜೆಪಿಯವರು ನಡೆಸುತ್ತಿರುವ ವ್ಯವಹಾರಗಳು, ಅವರು ಕಾರ್ಪೊರೇಟ್ ಸ್ನೇಹಿತರೊಂದಿಗೆ ಹೊಂದಿರುವ ಸಂಬಂಧವು ಕರ್ತವ್ಯಪ್ರಜ್ಞೆಗಿಂತಲೂ ಮಿಗಿಲಾದದ್ದು ಎಂಬುದನ್ನು ತೋರುತ್ತವೆ' ಎಂದು ಕಿಡಿಕಾರಿದ್ದಾರೆ.
'ರಾಜ್ಯದಲ್ಲಿ ಬುಡಕಟ್ಟು ಜನರ ಹಕ್ಕುಗಳನ್ನು ರಕ್ಷಿಸಲು ತಾವು ವಿಫಲವಾದದ್ದು ಏಕೆ ಎಂಬುದನ್ನು ಮೋದಿ ಅವರು ಬಸ್ತಾರ್ ಭೇಟಿ ವೇಳೆ ವಿವರಿಸಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ' ಎಂದು ಕುಟುಕಿದ್ದಾರೆ.
ದಟ್ಟ ಹಾಗೂ ಜೀವವೈವಿಧ್ಯದಿಂದ ಸಮೃದ್ಧವಾದ ಇಲ್ಲಿನ ಹಸ್ದೇವ್ ಅರಣ್ಯ ಪ್ರದೇಶವನ್ನು 'ರಾಜ್ಯದ ಶ್ವಾಸಕೋಶ' ಎನ್ನಲಾಗುತ್ತದೆ. ಆದರೆ, ಈ ಪ್ರದೇಶವೀಗ ಬಿಜೆಪಿ ಹಾಗೂ ಅವರ 'ನೆಚ್ಚಿನ ಮಿತ್ರ' ಅದಾನಿ ಎಂಟರ್ಪ್ರೈಸಸ್ನಿಂದಾಗಿ ಆಪತ್ತಿನಲ್ಲಿದೆ ಎಂದು ಆರೋಪಿಸಿದ್ದಾರೆ.
'ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ, ಈ ಪವಿತ್ರ ಅರಣ್ಯವನ್ನು ಉಳಿಸುವುದಕ್ಕಾಗಿ ಇಲ್ಲಿದ್ದ 40 ಕಲ್ಲಿದ್ದಲು ಗಣಿಗಳನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ, ಬಿಜೆಪಿ ಅಧಿಕಾರಕ್ಕೇರಿದ ಬಳಿಕ, ಆದಿವಾಸಿಗಳು ಹಾಗೂ ಪರಿಸರ ಹೋರಾಟಗಾರರ ತೀವ್ರ ವಿರೋಧದ ನಡುವೆಯೂ ಅದಾನಿ ಒಡೆತನದ ಪಾರ್ಸಾ ಕಲ್ಲಿದ್ದಲು ಘಟಕ ಗಣಿಗಾರಿಕೆಯನ್ನು ಮತ್ತೆ ಆರಂಭಿಸಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಆದಿವಾಸಿಗಳ ನೆಮ್ಮದಿಯನ್ನು ಪ್ರಧಾನಿ ಹಾಗೂ ಬಿಜೆಪಿ ಇಷ್ಟೊಂದು ನಿರ್ದಾಕ್ಷಿಣ್ಯವಾಗಿ ಹಾಳುಮಾಡಲು ಹೇಗೆ ಸಾಧ್ಯ' ಎಂದು ಕೇಳಿದ್ದಾರೆ.