ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

10 ವರ್ಷಗಳ ಸಾಧನೆ ಮುಂದಿಟ್ಟು‌ ಜನರ ಬಳಿ ಮತ ಕೇಳಿ: ಪ್ರಧಾನಿ ಮೋದಿಗೆ ಖರ್ಗೆ ಸಲಹೆ

Published 15 ಮೇ 2024, 9:59 IST
Last Updated 15 ಮೇ 2024, 9:59 IST
ಅಕ್ಷರ ಗಾತ್ರ

ಲಖನೌ: ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರ‌ದ ವೇಳೆ, ಇತರ ವಿಚಾರಗಳ ಕುರಿತು ಮಾತನಾಡುವ ಬದಲು, ದೇಶದ ಅಭಿವೃದ್ಧಿ ಬಗ್ಗೆ ಮಾತನಾಡಬೇಕು ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್‌ ಯಾದವ್‌ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಖರ್ಗೆ, 'ಅವರು (ಮೋದಿ) ಕಳೆದ 10 ವರ್ಷಗಳಲ್ಲಿ ಮಾಡಿರುವ ಕೆಲಸಗಳ ಆಧಾರದ ಮೇಲೆ ಏಕೆ ಮತ ಕೇಳುತ್ತಿಲ್ಲ' ಎಂದು ಪ್ರಶ್ನಿಸಿದ್ದಾರೆ.

ಮೋದಿ ಅವರು ಖಾಸಗಿ ವಾಹಿನಿಯೊಂದಕ್ಕೆ ಇತ್ತೀಚೆಗೆ ನೀಡಿರುವ ಸಂದರ್ಶನದಲ್ಲಿ, ತಾವು ಹಿಂದೂ–ಮುಸ್ಲಿಂ ವಿಚಾರವಾಗಿ ರಾಜಕಾರಣ ಮಾಡಲಾರಂಭಿಸಿದ್ದರೆ, ಸಾರ್ವಜನಿಕ ಜೀವನದಲ್ಲಿ ಇರುವುದಕ್ಕೇ ಅರ್ಹರಲ್ಲ ಎಂಬುದಾಗಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಖರ್ಗೆ, 'ಮೋದಿ ಅವರು ಗೋ ಮಾಂಸ, ಮಟನ್, ಚಿಕನ್‌, ಮೀನು ಮತ್ತು ಮಂಗಳಸೂತ್ರಗಳ ಬಗ್ಗೆ ಹೇಳಿಲ್ಲವೇ? ಈ ಪದಗಳನ್ನು ಪ್ರಧಾನಿಯವರು ಬಳಸಿದ್ದಾರೆಯೇ ವಿನಃ ನಾವಲ್ಲ' ಎಂದಿದ್ದಾರೆ.

'ಈ ಎಲ್ಲ ವಿಚಾರಗಳನ್ನು ಬಿಡಿ, ನೀವು ಏನು ಮಾಡಿದ್ದೀರಿ ಎಂಬುದನ್ನು ಜನರಿಗೆ ಹೇಳಿ. ಅವುಗಳ ಆಧಾರದಲ್ಲಿ ಮತ ಕೇಳಿ ಎಂದು ನಾವು ಅವರಿಗೆ ಹೇಳುತ್ತಿದ್ದೇವೆ' ಎಂದಿದ್ದಾರೆ.

'ಉತ್ತಮ ಸ್ಥಿತಿಯಲ್ಲಿ ಇಂಡಿಯಾ ಮೈತ್ರಿಕೂಟ'
ಸಾರ್ವತ್ರಿಕ ಚುನಾವಣೆಗೆ 7 ಹಂತಗಳಲ್ಲಿ ಮತದಾನ ನಡೆಯುತ್ತಿದೆ. ಸದ್ಯ 4 ಹಂತಗಳು ಮುಕ್ತಾಯವಾಗಿದ್ದು, ಮುಂದಿನ ಮೂರು ಹಂತಗಳು ಮೇ 20, 25 ಹಾಗೂ ಜೂನ್‌ 1ರಂದು ನಡೆಯಲಿವೆ.

'ದೇಶದಲ್ಲಿ 4 ಹಂತಗಳ ಮತದಾನ ಪೂರ್ಣಗೊಂಡಿದೆ. ಇಂಡಿಯಾ ಮೈತ್ರಿಕೂಟ ಅತ್ಯಂತ ಬಲಿಷ್ಠವಾಗಿದೆ. ದೇಶದ ಜನರು ಪ್ರಧಾನಿಗೆ ವಿದಾಯ ಹೇಳಲು ಸಜ್ಜಾಗಿದ್ದಾರೆ ಎಂದು ಪೂರ್ಣ ವಿಶ್ವಾಸದಿಂದ ಹೇಳಬಲ್ಲೆ. ಇಂಡಿಯಾ ಒಕ್ಕೂಟ ಜೂನ್‌ 4ರಂದು ಹೊಸ ಸರ್ಕಾರ ರಚಿಸಲಿದೆ' ಎಂದು ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.

'ಉತ್ತರ ಪ್ರದೇಶದ 79 ಕ್ಷೇತ್ರಗಳಲ್ಲಿ ಇಂಡಿಯಾ ಬಣ ಗೆಲುವು ಸಾಧಿಸಲಿದೆ. 'ಕ್ಯೊಟೊ' ಕ್ಷೇತ್ರದಲ್ಲಿ ಮಾತ್ರ ಪೈಪೋಟಿ ಇದೆ' ಎಂದು ಅಖಿಲೇಶ್‌ ಯಾದವ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೋದಿ ಸ್ಪರ್ಧಿಸಿರುವ ವಾರಾಣಸಿ ಲೋಕಸಭಾ ಕ್ಷೇತ್ರವನ್ನು ಜಪಾನ್‌ನ ಸುಂದರ ನಗರ 'ಕ್ಯೊಟೊ' ರೀತಿ ಅಭಿವೃದ್ಧಿಪಡಿಸಿದವರು ನಾವು ಎಂದು ಬಿಜೆಪಿ ಮತ್ತು ಕಾಂಗ್ರೆಸ್‌ ನಾಯಕರು ಹೇಳಿಕೊಳ್ಳುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT