ಮುಂಬೈ: ತಮ್ಮನ್ನು 'ನರ್ತಕಿ' ಎಂದ ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವುತ್ ಅವರಿಗೆ ಅಮರಾವತಿ ಸಂಸದೆ ನವನೀತ್ ರಾಣಾ ತಿರುಗೇಟು ನೀಡಿದ್ದಾರೆ.
ಸಾರ್ವಜನಿಕ ಸಾಮಾವೇಶದಲ್ಲಿ ಮಾತನಾಡಿದ ನಟಿ ಹಾಗೂ ರಾಜಕಾರಣಿ ರಾಣಾ ಅವರು ಸಂಜಯ್ ಅವರನ್ನು 'ರದ್ದಿ ಅಥವಾ ನಿಷ್ಪ್ರಯೋಜಕ' ಎಂದು ಕರೆದಿದ್ದಾರೆ. ಹಾಗೆಯೇ, 'ಅಮರಾವತಿಯ ಮಗಳ ಬಗೆಗಿನ ಈ ರೀತಿಯ ಮಾತುಗಳನ್ನು, ಇಲ್ಲಿನ ಜನರು ಸಹಿಸುವುದಿಲ್ಲ' ಎಂದು ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಣದ ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವುತ್ ಅವರು, 'ಈ ಲೋಕಸಭೆ ಚುನಾವಣೆಯು ಬಬ್ಲಿ (ಸಿನಿಮಾಗಳಲ್ಲಿ ಜನರನ್ನು ಸೆಳೆಯುವಂತಹ ಪಾತ್ರ) ಅಥವಾ ನರ್ತಕಿ ನಡುವಣ ಸ್ಪರ್ಧೆಯಲ್ಲ. ಮಹಾರಾಷ್ಟ್ರ ಹಾಗೂ ಮೋದಿ ನಡುವಣ ಹೋರಾಟ. ಆಕೆ ನರ್ತಕಿ, ಪರದೆಯ ಮೇಲೆ ಜನರನ್ನು ಸೆಳೆಯುವಂತೆ ನಟಿಸುವಾಕೆ. ಆದರೆ, ನೀವು ಅವರ ಜಾಲಕ್ಕೆ ಸಿಲುಕಬೇಡಿ' ಎಂದು ಕೆಲವು ದಿನಗಳ ಹಿಂದೆ ಕರೆ ನೀಡಿದ್ದರು.
2019ರ ಚುನಾವಣೆಯಲ್ಲಿ ಪಕ್ಷೇತರರಾಗಿ ಕಣಕ್ಕಿಳಿದು ಜಯ ಸಾಧಿಸಿದ್ದ ರಾಣಾ, ಈ ಬಾರಿ ಬಿಜೆಪಿ ಟಿಕೆಟ್ ಪಡೆದು ಸ್ಪರ್ಧಿಸುತ್ತಿದ್ದಾರೆ.