ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ವಕಾಲಿಕ ಕುಸಿತ ಕಾಣಲಿರುವ ಕಾಂಗ್ರೆಸ್: ಪ್ರಧಾನಿ ಮೋದಿ

ಪಶ್ಚಿಮ ಬಂಗಾಳದ ರ್‍ಯಾಲಿಯಲ್ಲಿ ಪ್ರಧಾನಿ ಮೋದಿ ಭವಿಷ್ಯ * ಟಿಎಂಸಿ ಓಲೈಕೆ ರಾಜಕಾರಣದಲ್ಲಿ ತೊಡಗಿದೆ ಎಂದು ವಾಗ್ದಾಳಿ
Published 3 ಮೇ 2024, 14:27 IST
Last Updated 3 ಮೇ 2024, 14:27 IST
ಅಕ್ಷರ ಗಾತ್ರ

ಬರ್ಧಮಾನ್: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಸಾರ್ವಕಾಲಿಕ ಕುಸಿತ ಕಾಣಲಿದೆ ಎಂದು ಭವಿಷ್ಯ ನುಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಪಕ್ಷವು ಅರ್ಧ ಶತಕದ ಗಡಿ ದಾಟಲೂ ಹರಸಾಹಸ ಮಾಡಲಿದೆ ಎಂದು ಹೇಳಿದರು.

ಬರ್ಧಮಾನ್–ದುರ್ಗಾಪುರ ಮತ್ತು ಕೃಷ್ಣಾನಗರದಲ್ಲಿ ಸರಣಿ ರ್‍ಯಾಲಿಗಳನ್ನು ನಡೆಸಿದ ಅವರು, ‘ಚುನಾವಣೋತ್ತರ ಸಮೀಕ್ಷೆ, ಮತಗಟ್ಟೆ ಸಮೀಕ್ಷೆಗಳ ಅಗತ್ಯವೇ ಇಲ್ಲ. ಕಾಂಗ್ರೆಸ್ ಸೋಲಿನ ಬಗ್ಗೆ ನಾನು ಬಹಳ ಹಿಂದೆಯೇ ಸಂಸತ್‌ನಲ್ಲಿ ಹೇಳಿದ್ದೇನೆ. ಅವರ ಹಿರಿಯ ನಾಯಕಿ ತಮ್ಮ ಲೋಕಸಭಾ ಸ್ಥಾನ ತ್ಯಜಿಸಿ ರಾಜಸ್ಥಾನದಿಂದ ರಾಜ್ಯಸಭೆ ಪ್ರವೇಶಿಸಿದಾಗಲೇ, ಅವರಿಗೆ ತಮ್ಮ ಸೋಲಿನ ಅರಿವಾಗಿದೆ ಎನ್ನುವುದು ಸ್ಪಷ್ಟವಾಗಿತ್ತು’ ಎಂದು ಸೋನಿಯಾ ಗಾಂಧಿ ಹೆಸರು ಉಲ್ಲೇಖಿಸದೆಯೇ ಹೇಳಿದರು.

ತೃಣಮೂಲ ಕಾಂಗ್ರೆಸ್ ಬಗ್ಗೆ ವಾಗ್ದಾಳಿ ನಡೆಸಿದ ಮೋದಿ, ‘ಪಕ್ಷವು ಪಶ್ಚಿಮ ಬಂಗಾಳದಲ್ಲಿ ಭ್ರಷ್ಟಾಚಾರ ಮತ್ತು ಓಲೈಕೆ ರಾಜಕಾರಣದಲ್ಲಿ ತೊಡಗಿದ್ದು, ರಾಜ್ಯದಲ್ಲಿ ಹಿಂದೂಗಳನ್ನು ಎರಡನೆಯ ದರ್ಜೆಯ ಪ್ರಜೆಗಳನ್ನಾಗಿ ಪರಿವರ್ತಿಸಿದೆ’ ಎಂದು ಆರೋಪಿಸಿದರು.

‘ಹಿಂದೂಗಳು ಬಂಗಾಳದಲ್ಲಿ ಎರಡನೆಯ ದರ್ಜೆಯ ಪ್ರಜೆಗಳಾಗಿರುವುದು ಏಕೆ? ಟಿಎಂಸಿಯ ಶಾಸಕರೊಬ್ಬರು ಇತ್ತೀಚೆಗೆ ಎಲ್ಲ ಹಿಂದೂಗಳನ್ನು ಭಾಗೀರಥಿ ನದಿಯಲ್ಲಿ ಎಸೆಯುತ್ತೇವೆ ಎಂದು ಹೇಳಿಕೆ ನೀಡಿದ್ದರು. ಇದು ಯಾವ ಬಗೆಯ ರಾಜಕಾರಣ? ಟಿಎಂಸಿಗೆ ಮಾನವೀಯತೆಗಿಂತ ಓಲೈಕೆಯೇ ಮುಖ್ಯವಾಯಿತೇ?’ ಎಂದು ಹುಮಾಯೂನ್ ಕಬೀರ್ ಅವರ ಹೇಳಿಕೆ ಉಲ್ಲೇಖಿಸಿ ವಾಗ್ದಾಳಿ ನಡೆಸಿದರು.

‘ಆಡಳಿತಾರೂಢ ಪಕ್ಷದ ಮುಖಂಡರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪಗಳು ಎದುರಾಗಿರುವ ಸಂದೇಶ್‌ಖಾಲಿಯ ಸಂತ್ರಸ್ತರ ವಿಚಾರದಲ್ಲಿ ತೃಣಮೂಲ ಕಾಂಗ್ರೆಸ್ ನಿರ್ಲಕ್ಷ್ಯ ವಹಿಸಿದೆ’ ಎಂದು ಟೀಕಿಸಿದರು.

ಶಾಲಾ ನೇಮಕಾತಿ ಹಗರಣ ಪ್ರಸ್ತಾಪಿಸಿದ ಅವರು, ‘ವಿವಿಧ ಹಗರಣಗಳ ಮೂಲಕ ಬಂಗಾಳದ ಜನರನ್ನು ಲೂಟಿ ಮಾಡುವುದರಲ್ಲಿ ತೊಡಗಿರುವ ಅಪರಾಧಿಗಳನ್ನು ಬಿಡುವುದಿಲ್ಲ. ಇದು ಮೋದಿ ಗ್ಯಾರಂಟಿ’ ಎಂದು ಭರವಸೆ ನೀಡಿದರು.

ಖಜಾನೆ ಆಸ್ಪತ್ರೆಗಳು ಮತ್ತು ಕಾನೂನು ಸುವ್ಯವಸ್ಥೆ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಲು ಟಿಎಂಸಿ ಪ್ರಯತ್ನಿಸುತ್ತಿದೆ. ಅದು ಸಮಾಜವಿರೋಧಿ ಶಕ್ತಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದೆ

-ನರೇಂದ್ರ ಮೋದಿ ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT