ನವದೆಹಲಿ: ಅಮೆರಿಕದಲ್ಲಿನ ಭಾರತದ ಮಾಜಿ ರಾಯಭಾರಿ ತರಣ್ಜಿತ್ ಸಿಂಗ್ ಮಂಗಳವಾರ ಬಿಜೆಪಿ ಸೇರಿದ್ದಾರೆ.
ತರಣ್ಜಿತ್ ಸಿಂಗ್ ಅವರನ್ನು ಪಕ್ಷವು ಪಂಜಾಬ್ನ ಅಮೃತಸರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗಿಳಿಸುವ ಸಾಧ್ಯತೆಗಳಿವೆ.
ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ವಿನೋದ್ ತವ್ಡೆ ಮತ್ತು ತರುಣ್ ಚುಘ್ ಅವರ ಸಮ್ಮುಖದಲ್ಲಿ ಅವರು ಬಿಜೆಪಿಗೆ ಸೇರ್ಪಡೆಯಾದರು.
ಭಾರತೀಯ ವಿದೇಶಾಂಗ ಸೇವೆಯ (ಐಎಫ್ಎಸ್) ಮಾಜಿ ಅಧಿಕಾರಿಯಾಗಿರುವ ಸಂಧು ಪ್ರತಿಷ್ಠಿತ ಮನೆತನಕ್ಕೆ ಸೇರಿದ್ದು, ಅವರ ತಂದೆ ಬಿಷನ್ ಸಿಂಗ್ ಸಮುಂದ್ರಿ ಅವರು ಖ್ಯಾತ ಶಿಕ್ಷಣ ತಜ್ಞ ಮತ್ತು ಗುರು ನಾನಕ್ ದೇವ್ ವಿಶ್ವವಿದ್ಯಾಲಯದ ಸ್ಥಾಪಕ ಕುಲಪತಿ ಆಗಿದ್ದರು. ಸಂಧು ಅವರ ಮೂಲಕ ಜಾಟ್ ಸಿಖ್ ಸಮುದಾಯದ ಮತಗಳನ್ನು ಆಕರ್ಷಿಸಿ ಪಂಜಾಬ್ನಲ್ಲಿ ಪ್ರಾಬಲ್ಯ ವೃದ್ಧಿಸಿಕೊಂಡು, ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವುದು ಬಿಜೆಪಿ ಗುರಿ.
2009ರಲ್ಲಿ ಅಮೃತಸರ ಲೋಕಸಭಾ ಕ್ಷೇತ್ರವನ್ನು ನವಜೋತ್ ಸಿಂಗ್ ಸಿಧು ಬಿಜೆಪಿಯಿಂದ ಕಸಿದುಕೊಂಡಿದ್ದರು. ನಂತರದ 2014 ಮತ್ತು 2019ರ ಲೋಕಸಭಾ ಚುನಾವಣೆಗಳಲ್ಲಿಯೂ ಬಿಜೆಪಿ ಇಲ್ಲಿ ಪರಾಭವಗೊಂಡಿತ್ತು. ಕ್ಷೇತ್ರವನ್ನು ಮತ್ತೆ ಗೆದ್ದುಕೊಳ್ಳುವ ನಿಟ್ಟಿನಲ್ಲಿ ಸಂಧು ಅವರನ್ನು ಅಭ್ಯರ್ಥಿಯಾಗಿಸುವುದು ಬಿಜೆಪಿ ಉದ್ದೇಶವಾಗಿದೆ.