ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೋದಿಗೆ ದೇಶ ನಡೆಸುವುದು ಗೊತ್ತಿಲ್ಲ: ರಾಹುಲ್ ಗಾಂಧಿ

ಚುನಾವಣಾ ಬಾಂಡ್ ಒಂದು ರೀತಿಯ ಸುಲಿಗೆ: ರಾಹುಲ್ ಗಾಂಧಿ ವಾಗ್ದಾಳಿ
Published 16 ಏಪ್ರಿಲ್ 2024, 14:01 IST
Last Updated 16 ಏಪ್ರಿಲ್ 2024, 14:01 IST
ಅಕ್ಷರ ಗಾತ್ರ

ಕೋಯಿಕ್ಕೋಡ್/ವಯನಾಡ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಅದು ‘ಒಂದು ರೀತಿಯ ಸುಲಿಗೆ’ ಮತ್ತು ಉದ್ಯಮಿಗಳನ್ನು ಗುರಿಯಾಗಿಸಿಕೊಂಡ ‘ಬೆದರಿಕೆಯ ತಂತ್ರ’ ಎಂದು ಆರೋಪಿಸಿದ್ದಾರೆ.

ವಯನಾಡ್ ಕ್ಷೇತ್ರದಲ್ಲಿ ಮಂಗಳವಾರ ರ್‍ಯಾಲಿ ನಡೆಸಿದ ರಾಹುಲ್, ‘ಪ್ರತಿಯೊಂದು ಸಣ್ಣ ಹಳ್ಳಿ ಮತ್ತು ಪಟ್ಟಣದ ಬೀದಿಗಳಲ್ಲಿ ಜನರನ್ನು ಬೆದರಿಸಿ ಹಣ ಸುಲಿಗೆ ಮಾಡುವ ಕೆಲವು ಜನರಿರುತ್ತಾರೆ. ಮಲಯಾಳಂನಲ್ಲಿ ಅದನ್ನು ‘ಕೊಳ್ಳ ಅಡಿಕ್ಕಲ್’ (ಲೂಟಿ) ಎನ್ನುತ್ತಾರೆ. ಆದರೆ, ಮೋದಿ ಅದನ್ನು ಚುನಾವಣಾ ಬಾಂಡ್ ಎಂದು ಕರೆಯುತ್ತಾರೆ. ಒಬ್ಬ ಸಾಮಾನ್ಯ ಕಳ್ಳ ಬೀದಿಗಳಲ್ಲಿ ಮಾಡುವುದನ್ನು ಪ್ರಧಾನಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾಡುತ್ತಿದ್ದಾರೆ’ ಎಂದು ರಾಹುಲ್ ಆರೋಪಿಸಿದ್ದಾರೆ.

ದೇಶದ ಕೆಲವು ಶ್ರೀಮಂತ ಉದ್ಯಮಿಗಳಿಗೆ ಮೋದಿ ನೆರವಾಗಿದ್ದಾರೆ ಎಂದು ರಾಹುಲ್ ಹೇಳಿದರು.

‘ಇ.ಡಿ, ಸಿಬಿಐ, ಆದಾಯ ತೆರಿಗೆ ಅಧಿಕಾರಿಗಳು ಬರುತ್ತಾರೆ, ತನಿಖೆ ನಡೆಸುತ್ತಾರೆ. ಕೊನೆಯಲ್ಲಿ, ನೀವು ನಿಮ್ಮ ಉದ್ಯಮವನ್ನು ಅದಾನಿಗೆ ಏಕೆ ಕೊಡಬಾರದು’ ಎಂದು ಹೇಳುತ್ತಾರೆ. ಮುಂಬೈ ವಿಮಾನ ನಿಲ್ದಾಣವನ್ನು ಅದರ ಹಿಂದಿನ ಮಾಲೀಕನಿಂದ ಅದಾನಿ ಪಡೆದಿದ್ದು ಹೀಗೆ’ ಎಂದು ಆರೋಪಿಸಿದರು.

ಕೋಯಿಕ್ಕೋಡ್‌ನ ಕೊಡಿಯತ್ತೂರಿನಲ್ಲಿ ನಡೆದ ರೋಡ್ ಶೋ ವೇಳೆ ನೆರೆದಿದ್ದ ಜನಸ್ತೋಮವನ್ನು ಉದ್ದೇಶಿಸಿ ರಾಹುಲ್ ಮಾತನಾಡಿದರು.  

‘ಮೋದಿ ಅವರ ಕೆಲಸ ದೇಶದ ನಿಜವಾದ ಸಮಸ್ಯೆಗಳಿಂದ ಜನರ ಗಮನ ಬೇರೆಡೆ ಸೆಳೆಯುವುದು, ಭಾರತದ ಶ್ರೀಮಂತ ಉದ್ಯಮಿಗಳನ್ನು ರಕ್ಷಿಸುವುದು ಮತ್ತು ಅವರ ಬ್ಯಾಂಕ್ ಸಾಲಗಳನ್ನು ಮನ್ನಾ ಮಾಡುವುದು’ ಎಂದು ಆರೋಪಿಸಿದರು.

ಮತ್ತೊಂದು ರೋಡ್ ಶೋನಲ್ಲಿ ಮಾತನಾಡಿದ ರಾಹುಲ್, ಮೋದಿ ಅವರಿಗೆ ದೇಶವನ್ನು ಹೇಗೆ ನಡೆಸಬೇಕು ಎನ್ನುವುದು ಗೊತ್ತಿಲ್ಲ ಎಂದು ಆರೋಪಿಸಿದರು. ಕೋವಿಡ್ ಸಮಯದಲ್ಲಿ ತಟ್ಟೆ ಹೊಡೆಯಿರಿ, ಮೊಬೈಲ್ ಫೋನ್ ಲೈಟ್ ಹಾಕಿ ಎಂದು ಪ್ರಧಾನಿ ಹೇಳಿದ್ದನ್ನು ರಾಹುಲ್ ಲೇವಡಿ ಮಾಡಿದರು.            

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT