ಚಾಮರಾಜನಗರ: ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ತಾಲ್ಲೂಕಿನ ಉಮ್ಮತ್ತೂರಿನ ವರ್ಷಾ ಅವರು ಭಾಗವಹಿಸಿದ್ದಾರೆ.
ವರ್ಷಾ ಅವರು ಬಾಳೆದಂಡಿನ ನಾರಿನಿಂದ ವಿವಿಧ ಕರಕುಶಲ ವಸ್ತುಗಳನ್ನು ತಯಾರಿಸುತ್ತಾರೆ. ವರ್ಷಾ ಅವರ ಪ್ರಯತ್ನವನ್ನು ಮೋದಿ ಅವರು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಶ್ಲಾಘಿಸಿದ್ದರು.
ಶನಿವಾರ ವರ್ಷಾ ಅವರಿಗೆ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಲು ಆಮಂತ್ರಣ ಬಂದಿದ್ದು, ಭಾನುವಾರ ಮಧ್ಯಾಹ್ನ ಅವರು ದೆಹಲಿ ತಲುಪಿದ್ದಾರೆ.
‘ಶನಿವಾರ ಸಂಜೆ 4 ಗಂಟೆಗೆ ಪ್ರಧಾನಿ ಕಚೇರಿಯಿಂದ ಕರೆ ಬಂತು. ಟಿವಿನಲ್ಲೂ ಮಾಹಿತಿ ಬಂತು. ಹಾಗಾಗಿ, ಬೆಳಿಗ್ಗೆ ಬೇಗ ಹೊರಟೆ. ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗಿಯಾಗುವೆ’ ಎಂದು ವರ್ಷಾ ‘ಪ್ರಜಾವಾಣಿ’ಗೆ ತಿಳಿಸಿದರು.