ರಾಮನಗರ: ಚನ್ನಪಟ್ಟಣದಲ್ಲಿ ಭಾನುವಾರ ನಡೆದ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಜೊತೆ ವೇದಿಕೆಯಲ್ಲಿ ರೌಡಿಶೀಟರ್ ಮುದ್ದುಕೃಷ್ಣ ಕಾಣಿಸಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ.
ವೇದಿಕೆಯಲ್ಲಿ ಮೋದಿ ಅವರಿಗೆ ಅಂಬೆಗಾಲು ಕೃಷ್ಣನ ಪ್ರತಿಮೆಯನ್ನು ಉಡುಗೊರೆಯಾಗಿ ನೀಡುವ ವೇಳೆ ಮುದ್ದುಕೃಷ್ಣ, ಮೋದಿ ಅವರ ಜೊತೆ ಕಾಣಿಸಿಕೊಂಡಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ಮಾರ್ಚ್ನಲ್ಲಿ ಮಂಡ್ಯಕ್ಕೆ ಭೇಟಿ ನೀಡಿದ್ದ ವೇಳೆ ರೌಡಿಶೀಟರ್ ಫೈಟರ್ ರವಿಗೆ ಪ್ರಧಾನಿ ಮೋದಿ ಕೈ ಮುಗಿದಿದ್ದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.
ಮೋದಿ ಜೊತೆಗೆ ಮುದ್ದುಕೃಷ್ಣ ಇರುವ ಫೋಟೊವನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಂಡಿದೆ.
‘ಕೊಲೆ ಆರೋಪಿಗಳು ವೇದಿಕೆ ಏರುವ ಅವಕಾಶ ಇರುವುದು ಬಿಜೆಪಿಯಲ್ಲಿ ಮಾತ್ರ. ಒಬ್ಬ ಡಬಲ್ ಮರ್ಡರ್ ಆರೋಪಿಯು ಪ್ರಧಾನಿಗೆ ಸನ್ಮಾನ ಮಾಡಿದ್ದು, ಮೋದಿ ಕಿರೀಟಕ್ಕೆ ಬಿಜೆಪಿಯ ಮತ್ತೊಬ್ಬ ರೌಡಿಶೀಟರ್ ಗರಿ ಸೇರ್ಪಡೆ ಆಗಿದೆ’ ಎಂದು ವ್ಯಂಗ್ಯವಾಡಿದೆ.
ಯಾರು ಈ ಮುದ್ದುಕೃಷ್ಣ
ಚನ್ನಪಟ್ಟಣದ ಎಲೆಕೇರಿ ನಿವಾಸಿ ಆಗಿರುವ ಮುದ್ದುಕೃಷ್ಣ 2009ರಲ್ಲಿ ಬೆಂಗಳೂರಿನ ಸುಬ್ರಮಣ್ಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಜೋಡಿ ಕೊಲೆ ಸೇರಿದಂತೆ ಹಲವು ಅಪರಾಧ ಪ್ರಕರಣಗಳ ಆರೋಪಿ. ಚನ್ನಪಟ್ಟಣ ವ್ಯಾಪ್ತಿಯ ರೌಡಿಶೀಟರ್.
ಈ ಹಿಂದೆ ಚನ್ನಪಟ್ಟಣ ಕಾಂಗ್ರೆಸ್ನ ನಗರ ಘಟಕದ ಅಧ್ಯಕ್ಷ, ಚನ್ನಪಟ್ಟಣ ನಗರಸಭೆಯ ಉಪಾಧ್ಯಕ್ಷ ಹಾಗೂ ಪ್ರಭಾರ ಅಧ್ಯಕ್ಷರಾಗಿ ಕೆಲಸ ಮಾಡಿರುವ ಮುದ್ದುಕೃಷ್ಣ, ಈಚೆಗಷ್ಟೇ ಸಿ.ಪಿ. ಯೋಗೇಶ್ವರ್ ನೇತೃತ್ವದಲ್ಲಿ ಬಿಜೆಪಿ ಸೇರಿದ್ದರು.
ಚನ್ನಪಟ್ಟಣದಲ್ಲಿ ಭಾನುವಾರ ನಡೆದ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕಾಣಿಸಿಕೊಂಡ ರೌಡಿಶೀಟರ್ ಮುದ್ದುಕೃಷ್ಣ (ಬಲತುದಿಯಲ್ಲಿ)