ಬೆಂಗಳೂರು: ‘ಬೇರೆ ಪ್ರಶ್ನೆ ಇದ್ರೆ ಕೇಳಣ್ಣ...!’
‘ಕೆ.ಎಸ್.ಈಶ್ವರಪ್ಪ ಅವರನ್ನು ರಾಜ್ಯಪಾಲ ಮಾಡುವ ಪ್ರಸ್ತಾಪ ಇದೆಯೇ’ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮೇಲಿನಂತೆ ಪ್ರತಿಕ್ರಿಯಿಸಿದರು.
‘ಈಶ್ವರಪ್ಪ ಕಥೆ ಏನು’ ಎಂಬ ಮತ್ತೊಂದು ಪ್ರಶ್ನೆಗೆ, ‘ಅವರು ಹಿರಿಯ ನಾಯಕರು. ಕೆಲವು ತಪ್ಪು ಮಾಹಿತಿಗಳು ಅವರಿಗೆ ತಲುಪಿವೆ. ಹೀಗಾಗಿ ಈ ರೀತಿಯ ಚರ್ಚೆಗಳು ನಡೆಯುತ್ತಿವೆ. ಅವರಿಗೆ ಸತ್ಯ ಅರ್ಥ ಆದ ಮೇಲೆ ಸಮಸ್ಯೆ ಬಗೆಹರಿಯುವ ವಿಶ್ವಾಸ ಈಗಲೂ ಇದೆ’ ಎಂದು ಹೇಳಿದರು.
ಅಸಮಾಧಾನಗೊಂಡಿರುವ ಬಿಜೆಪಿ ನಾಯಕರನ್ನು ಕಾಂಗ್ರೆಸ್ ಸೆಳೆಯಲು ಮುಂದಾಗಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ಕಳೆದ ಒಂದು ವಾರದ ಘಟನೆಗಳನ್ನು ಅವಲೋಕನ ಮಾಡಿದರೆ, ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಅವರ ನಾಯಕರಿಗಿಂತ ಬಿಜೆಪಿ ಮುಖಂಡರ ಬಗ್ಗೆಯೇ ಹೆಚ್ಚು ವಿಶ್ವಾಸ ಬಂದಿದೆ.
ಎಂ.ಬಿ.ಪಾಟೀಲ ಮತ್ತು ಇತರರ ಹೇಳಿಕೆಗಳನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಸದಾನಂದಗೌಡ ಬಿಜೆಪಿ ಬಿಟ್ಟು ಹೋಗುವುದಿಲ್ಲ’ ಎಂದು ಅವರು ಹೇಳಿದರು.