ದೇವನಹಳ್ಳಿ: ಉದ್ಯಮಿ ರೊನಾಲ್ಡ್ ಕೊಲಾಸೊ ಅವರು ಮತ ಚಲಾಯಿಸುವ ಉದ್ದೇಶದಿಂದಲೇ ದುಬೈನಿಂದ ನಗರಕ್ಕೆ ಬಂದಿದ್ದಾರೆ.
ಮಂಗಳವಾರವೇ ನಗರಕ್ಕೆ ಬಂದಿದ್ದ ಅವರು, ದೇವನಹಳ್ಳಿ ತಾಲ್ಲೂಕಿನ ಸಾದಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮತ ಚಲಾಯಿಸಿದರು.
’ಎಲ್ಲ ಕಾರ್ಯಗಳನ್ನು ಬದಿಗೊತ್ತಿ ಕೇವಲ ಮತ ಚಲಾಯಿಸಲು ಬೆಂಗಳೂರಿಗೆ ಬಂದಿದ್ದೇನೆ. ದೇಶದ ಭವಿಷ್ಯ ನಿರ್ಧರಿಸುವ ಶಕ್ತಿ ಮತಕ್ಕಿದೆ. ಅದನ್ನು ವ್ಯರ್ಥ ಮಾಡಿಕೊಳ್ಳಬಾರದು. ಅದಕ್ಕಾಗಿಯೇ ನಾನು ದುಬೈನಿಂದ ಬೆಂಗಳೂರಿಗೆ ಬಂದಿದ್ದೇನೆ‘ ಎಂದು ರೊನಾಲ್ಡ್ ಕೊಲಾಸೊ ತಿಳಿಸಿದರು.
’ನಾವು ಎಲ್ಲಿಯೇ ಇದ್ದರೂ ನಮ್ಮ ಹೃದಯ ನಾಡಿಗಾಗಿ ಮಿಡಿಯುತ್ತದೆ. ಇಲ್ಲಿ ನಡೆಯುವ ಪ್ರತಿಯೊಂದು ಮಹತ್ವದ ಕಾರ್ಯಗಳಲ್ಲಿ ಭಾಗಿಯಾಗಬೇಕು. ಮತ ಚಲಾಯಿಸುವುದು ಸಹ ಮೂಲಭೂತ ಹಕ್ಕು. ಅದು ನಮ್ಮೆಲ್ಲರ ಕರ್ತವ್ಯ. ಸರ್ಕಾರದ ರಚನೆಯಲ್ಲಿ ನಮ್ಮ ಪಾಲು ಇರಬೇಕು. ಆಗ ಮಾತ್ರ ಪ್ರಜೆಗಳ ಒಳಿತು ಕೈಗೊಳ್ಳದ ಮತ್ತು ಸಾಮರಸ್ಯ, ಸಹಬಾಳ್ವೆ ವಾತಾವರಣ ಸೃಷ್ಟಿಸದ ಸರ್ಕಾರವನ್ನು ಟೀಕಿಸುವ ಹಕ್ಕು ಪ್ರಜೆಗಳಿಗೆ ಇರುತ್ತದೆ‘ ಎಂದು ಹೇಳಿದರು.