ವಿಜಯಪುರ: ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಕಳೆದ ಐದು ವರ್ಷಗಳ ಕಾಲ ಧರ್ಮ, ಜಾತಿಗಳ ನಡುವೆ ದ್ವೇಷ ಬಿತ್ತುವ ಹಾಗೂ ತಮ್ಮದೇ ಪಕ್ಷದ ನಾಯಕರ ವಿರುದ್ಧ ಅವಮಾನಕರ ಮತ್ತು ಅಶ್ಲೀಲ ಹೇಳಿಕೆಗಳನ್ನು ದಿನವಿಡೀ ನೀಡುತ್ತಾ ಬಂದಿದ್ದಾರೆ. ಬಾಯಿ ತೆರೆದರೆ ವಿಷವನ್ನು ಖಾರುತ್ತಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಆರೋಪಿಸಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ ಅವರನ್ನು ಹುಚ್ಚ ಎಂದು ಕರೆದಿದ್ದಾರೆ. ಇವರನ್ನು ರಾಜ್ಯದ ಜನತೆ ಏನನ್ನಾತ್ತಾರೆ ಎಂಬ ಕಲ್ಪನೆ ಇಲ್ಲ. ಮೊದಲು ಇವರ ನಡಾವಳಿಕೆ ಅವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕಾಂಗ್ರೆಸ್ ವರಿಷ್ಢೆ ಸೋನಿಯಾ ಗಾಂಧಿಗೆ ವಿಷ ಕನ್ಯೆ, ಪಾಕಿಸ್ತಾನ ಏಜೆಂಟ್ ಎಂದು ಕರೆದ್ದಿದ್ದಾರೆ. ಸೋನಿಯಾ ಗಾಂಧಿ ಅವರು ರಾಜೀವ್ ಗಾಂಧಿ ಅವರನ್ನು ವಿವಾಹವಾಗಿ ಈ ದೇಶದ ಸೊಸೆಯಾಗಿ ಬಂದಿದ್ದಾರೆ. ಎರಡು ಬಾರಿ ಪ್ರಧಾನಿಯಾಗುವ ಅವಕಾಶ ಇದ್ದರೂ ತ್ಯಾಗ ಮಾಡಿದ್ದಾರೆ. ಅವರ ಚಾರಿತ್ರ್ಯ, ದೃಢತೆ ಬಗ್ಗೆ ಯತ್ನಾಳ ಮಾತನಾಡಿರುವುದು ಖಂಡನೀಯ ಎಂದರು.
ಯತ್ನಾಳ ಅವರು ಐದು ವರ್ಷ ಯಾರಾರ ವಿರುದ್ದ ವಿಷ ಖಾರುತ್ತಾರೆ. ಏನೇನು ಮಾತನಾಡಿದ್ದಾರೆ ಎಂಬುದೇ ದೊಡ್ಡ ಗ್ರಂಥವಾಗುತ್ತದೆ ಎಂದರು.
ಯತ್ನಾಳ ಅವರು ಈ ಮೊದಲು ಸೋಮಣ್ಣನ ಬೈದರು, ಬಳಿಕ ಗೆಳತನ ಮಾಡಿದರು. ಯಡಿಯೂರಪ್ಪ, ವಿಜಯೇಂದ್ರ ಬಗ್ಗೆ ಏನಿಲ್ಲ ಎಂದರೂ ಕನಿಷ್ಠ ಒಂದು ಸಾವಿರ ಬಾರಿ ಅಸಹ್ಯವಾಗಿ ಬೈಯ್ದಿದ್ದಾರೆ ಎಂದು ಹೇಳಿದರು.
ಶಾಸಕರಾದವರು ಯಾವುದೇ ಒಂದು ಸಮಾಜ, ಜಾತಿ, ಧರ್ಮಕ್ಕೆ ಸೀಮಿತವಲ್ಲ ಎಂಬ ಕನಿಷ್ಠ ಪ್ರಜ್ಞೆ ಇಲ್ಲದೆ ಮುಸ್ಲಿಮರ ಬಗ್ಗೆ ಮಾತನಾಡಿದ್ದಾರೆ. ನನ್ನ ಆಫೀಸ್ ಗೆ ಟೊಪ್ಪಿ ಹಾಕಿ ಬರಬಾರದು, ಬುರ್ಕಾ ಹಾಕಿಕೊಂಡು ಬರಬಾರದು, ಗಡ್ಡ ಬಿಟ್ಟುಕೊಂಡು ಬರಬಾರದು ಎಂದು ಹೇಳಿದ್ದಾರೆ ಎಂದು ದೂರಿದರು.
ಬಸವಣ್ಣನ ಹೆಸರು ಇಟ್ಟುಕೊಂಡು ಬಸವಣ್ಣನ ವಿಚಾರಧಾರೆಗೆ ವಿರುದ್ದವಾಗಿ ವರ್ತಿಸುತ್ತಿದ್ದಾರೆ. ಬಸವಣ್ಣನ ಆಚಾರ, ವಿಚಾರ, ತತ್ವ, ಸಿದ್ಧಾಂತಕ್ಕೆ ವಿರುದ್ಧವಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಿದರು.
ಇದೀಗ ಜನರಿಗೆ ಸಮಯ ಬಂದಿದೆ. ವಿಜಯಪುರ ಜನತೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು. ಬಸನಗೌಡರ ಈ ಹೇಳಿಕೆಯನ್ನು
ಬಸವನಾಡಿನ ಜನತೆ ಒಪ್ಪುವುದಿಲ್ಲ ಎಂದರು.
ಹಲ್ಲೆ ಖಂಡನೆ: ಕಾಂಗ್ರೆಸ್ ಮುಖಂಡ ಡಾ. ಜಿ.ಪರಮೇಶ್ವರ ಅವರ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿರುವುದು ಹೇಯ ಕೃತ್ಯ, ಖಂಡಿಸುತ್ತೇನೆ ಎಂದರು.
ರಾಜ್ಯದಲ್ಲಿ ಬಿಜೆಪಿ ನಾಯಕತ್ವ ಖತಂ ಆಗಿದೆ. ಹೀಗಾಗಿ ಚುನಾವಣಾ ಪ್ರಚಾರಕ್ಕೆ ಮೋದಿ ಬರುತ್ತಿದ್ದಾರೆ. ಮೋದಿ ಆಡಳಿತದಲ್ಲಿ ದೇಶದ ಆರ್ಥಿಕತೆ ಕುಂಟಿತವಾಗಿದೆ. ಕೋಟ್ಯಂತರ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಬೆಲೆ ಏರಿಕೆ ಗಗನಕ್ಕೇರಿದೆ. ಡಬ್ಬಲ್ ಎಂಜಿನ್ ಫೇಲ್ ಆಗಿದೆ. ಗುಜರಿಗೆ ಹಾಕಬೇಕಾದ ಪರಿಸ್ಥಿತಿ ಬಂದಿದೆ ಎಂದರು.
'ನೀರು ಎಂದರೆ ಎಂ.ಬಿ.ಪಾಟೀಲ, ಎಂ.ಬಿ.ಪಾಟೀಲ ಎಂದರೆ ನೀರು' ಎಂದು ಸಿದ್ದೇಶ್ವರ ಸ್ವಾಮೀಜಿಗಳೇ ಹೇಳಿದ್ದಾರೆ. ಹೀಗಿರುವಾಗ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಆರೋಪಗಳಿಗೆ ಜನ ಬೆಲೆ ಕೊಡಲ್ಲ ಎಂದರು.
ಮಹಾರಾಷ್ಟ್ರ ಗಡಿ ಭಾಗದ ಜತ್ ತಾಲ್ಲೂಕಿನಲ್ಲಿ ಕುಡಿಯುವ ನೀರಿಗೆ ಜನ ಪರದಾಡುತ್ತಿದ್ದಾರೆ. 45 ವರ್ಷ ಆದರೂ ಮೈಶಾಳ ಯೋಜನೆ ಪೂರ್ಣವಾಗಿಲ್ಲ. ಇದರ ಬಗ್ಗೆ ಫಡಣವೀಸ್ ಮಾತನಾಡಲಿ. ಇದುವರೆಗೂ ಫಡಣವೀಸ್ ಕಂಪನಿ ನೀರು ಕೊಡಲು ಸಾಧ್ಯವಾಗಿಲ್ಲ ಹೀಗಾಗಿ ಜತ್ ಭಾಗದ ಕನ್ನಡಿಗರು ಕರ್ನಾಟಕ ಸೇರಬೇಕು ಎನ್ನುತ್ತಿದ್ದಾರೆ ಎಂದರು.
ಅಡೆತಡೆ ಆರೋಪ: ಬಬಲೇಶ್ವರ ಕ್ಷೇತ್ರದಲ್ಲಿ ನನ್ನ ಪರವಾಗಿ ಪತ್ನಿ ಆಶಾ ಪಾಟೀಲ ಅವರು ಪ್ರಚಾರ ಮಾಡುವಾಗ ಬಿಜೆಪಿ ಅಭ್ಯರ್ಥಿ ಕಡೆಯವರು ಅಡೆತಡೆ ಮಾಡಿದ್ದಾರೆ ಎಂದು ಆರೋಪಿಸಿದರು.
ಮೂರು ಬಾರಿ ಚುನಾವಣೆಯಲ್ಲಿ ಸೋತಿದ್ದೇನೆ ಎಂದು ಜನರ ಕಾಲು ಹಿಡಿದುಕೊಳ್ಳುವುದು, ಕಣ್ಣೀರು ಸುರಿಸುವ ನಾಟಕವಾಡುತ್ತಿದ್ದಾರೆ. ಇಷ್ಟು ದಿನ ಕ್ಷೇತ್ರದಲ್ಲಿ ಎಷ್ಟು ಮನೆ ಮುರಿದಿದ್ದೀರಿ ಎಂದು ಗೊತ್ತಿದೆ ಎಂದರು.
ಗುಂಡಾಗಿರಿ ನಾಟಕ ಬಿಟ್ಟು ಇದೀಗ ಅಳುವ ನಾಟಕ ಶುರು ಮಾಡಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ರಾಜು ಆಲಗೂರ, ಎಐಸಿಸಿ ವೀಕ್ಷಕಿ ಪ್ರೀತಿ ಜೈಸ್ವಾಲ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.