ಕೊಪ್ಪಳ: ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ನಾಮಪತ್ರ ಸಲ್ಲಿಕೆ ಮೆರವಣಿಗೆ ವೇಳೆ ಪಾಲ್ಗೊಂಡಿದ್ದ ನಾಯಕರಿಗೆ ಇಲ್ಲಿನ ಬಿರುಬಿಸಿಲಿನ ತಾಪ ತಟ್ಟಿತು.
ಇಲ್ಲಿನ ಸಿರಸಪ್ಪಯ್ಯನ ಮಠದಿಂದ ಆರಂಭವಾದ ಮೆರವಣಿಗೆ ಅಶೋಕ ಸರ್ಕಲ್ ಮಾರ್ಗವಾಗಿ ತಾಲ್ಲೂಕು ಕ್ರೀಡಾಂಗಣದ ತನಕ ನಡೆಯಿತು. ಅಂದಾಜು ಮೂರು ಕಿ.ಮೀ. ದೂರದ ಮಾರ್ಗದಲ್ಲಿ ನಡೆದ ಮೆರವಣಿಗೆಯಲ್ಲಿ ಸಚಿವರಾದ ಎಚ್.ಕೆ. ಪಾಟೀಲ, ಸತೀಶ ಜಾರಕಿಹೊಳಿ, ಜಮೀರ್ ಅಹಮದ್, ಶಿವರಾಜ ತಂಗಡಗಿ ಶಾಸಕ ರಾಘವೇಂದ್ರ ಹಿಟ್ನಾಳ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಬಿಸಿಲು ತಡೆಯಲಾಗದೆ ಮೆರವಣಿಗೆ ವಾಹನ ವೇಗವಾಗಿ ಸಾಗಿತು.
ತೆರೆದ ವಾಹನದಲ್ಲಿ ಬಂದ ಈ ರಾಜಕೀಯ ನಾಯಕರು ಬಿಸಿಲಿನಿಂದ ಬಳಲಿ ಪದೇ ಪದೇ ನೀರು ಕುಡಿಯಬೇಕಾಯಿತು. ಕೊಪ್ಪಳ ಕ್ಷೇತ್ರದ ವಿವಿಧೆಡೆಯಿಂದ ಬಂದ ಕಾರ್ಯಕರ್ತರು ಮರದ ನೆರಳಿನಲ್ಲಿ ವಿಶ್ರಾಂತಿ ಪಡೆದರು. ಅವರಿಗೆ ನೀರು ಹಾಗೂ ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು. ಜನ ನೀರು ಪಡೆಯಲು ಮುಗಿಬಿದ್ದಿದ್ದರು.
ಈಗಾಗಲೇ ಸಾಂಕೇತಿಕವಾಗಿ ರಾಜಶೇಖರ ನಾಮಪತ್ರ ಸಲ್ಲಿಕೆ ಮಾಡಿದ್ದು, ಈಗ ಮೆರವಣಿಗೆ ಮೂಲಕ ಶಕ್ತಿ ಪ್ರದರ್ಶನ ಮಾಡಿದರು.