ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಎರಡನೇ ಅವಧಿಯ ಸರ್ಕಾರದಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಮೂವರು ಸಚಿವರು ಈ ಬಾರಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಕೇಂದ್ರ ಸರ್ಕಾರದಲ್ಲಿ ಪ್ರಭಾವಿ ಸಚಿವರ ಪೈಕಿ ಒಬ್ಬರಾಗಿರುವ ಪ್ರಲ್ಹಾದ ಜೋಶಿ ಅವರು ಕಾಂಗ್ರೆಸ್ನ ಹೊಸ ಮುಖ ವಿನೋದ್ ಅಸೂಟಿ ಅವರನ್ನು ಎದುರಿಸುತ್ತಿದ್ದಾರೆ. ಲಿಂಗಾಯತರಿಗೆ ಅನ್ಯಾಯವಾಗಿದೆ ಎಂಬ ಘೋಷಣೆ ಮುಂದಿಟ್ಟುಕೊಂಡು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವುದಾಗಿ ಶಿರಹಟ್ಟಿ ಭಾವೈಕ್ಯಪೀಠದ ದಿಂಗಾಲೇಶ್ವರ ಸ್ವಾಮೀಜಿ ಘೋಷಿಸಿದ್ದಾರೆ. ತ್ರಿಕೋನ ಸ್ಪರ್ಧೆ ಸಾಧ್ಯತೆ ಇದೆ.
ಉಡುಪಿ–ಚಿಕ್ಕಮಗಳೂರು ಕ್ಷೇತ್ರ ಪ್ರತಿನಿಧಿಸುತ್ತಿರುವ ಶೋಭಾ ಕರಂದ್ಲಾಜೆ, ಅಲ್ಲಿ ವಿರೋಧ ವ್ಯಕ್ತವಾಗಿದ್ದರಿಂದ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ತಮ್ಮ ಸ್ಪರ್ಧೆಯನ್ನು ಬದಲಾಯಿಸಿದ್ದಾರೆ. ರಾಜ್ಯಸಭೆಯ ಮಾಜಿ ಸದಸ್ಯ ಪ್ರೊ.ಎಂ.ವಿ. ರಾಜೀವ್ ಗೌಡ ಇವರ ಎದುರಾಳಿ. ಶೋಭಾ ಅವರು ಒಮ್ಮೆ ಯಶವಂತಪುರ ಕ್ಷೇತ್ರದ ಶಾಸಕರಾಗಿದ್ದರು. ರಾಜಾಜಿನಗರದಿಂದ ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಭಗವಂತ ಖೂಬಾ ಅವರಿಗೆ ಸಚಿವ ಈಶ್ವರ ಖಂಡ್ರೆಯವರ ಪುತ್ರ ಸಾಗರ್ ಖಂಡ್ರೆ ಪ್ರತಿಸ್ಪರ್ಧಿ. ಸ್ಥಳೀಯ ಶಾಸಕರ ವಿರೋಧದ ಮಧ್ಯೆಯೂ ಖೂಬಾಗೆ ಪಕ್ಷ ಟಿಕೆಟ್ ನೀಡಿದೆ. ಮತ್ತೋರ್ವ ಸಚಿವ ಎ. ನಾರಾಯಣಸ್ವಾಮಿ ಈ ಬಾರಿ ಕಣಕ್ಕೆ ಇಳಿದಿಲ್ಲ.