ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ: ವಾಹನ ಚಾಲಕರಿಗೆ ಸಿಗದ ಅಂಚೆ ಮತ ಸೌಲಭ್ಯ

Published 24 ಏಪ್ರಿಲ್ 2024, 23:08 IST
Last Updated 24 ಏಪ್ರಿಲ್ 2024, 23:08 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭಾ ಚುನಾವಣೆಯ ಕರ್ತವ್ಯಕ್ಕೆ ತೆರಳುವ ಹೊರಗುತ್ತಿಗೆ ವಾಹನಗಳ ಚಾಲಕರು ಹಾಗೂ ಸಿಬ್ಬಂದಿ ಈ ಬಾರಿಯೂ ಮತದಾನದ ಅವಕಾಶದಿಂದ ವಂಚಿತರಾಗಲಿದ್ದಾರೆ.

ಸಶಸ್ತ್ರ ಮೀಸಲು ಪಡೆ, ಹೊರ ರಾಜ್ಯ, ದೇಶಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರು, ಪೊಲೀಸ್‌ ಸಿಬ್ಬಂದಿ ಮೊದಲಾದ ಸೇವಾ ಮತದಾರರಿಗೆ ಮತದಾನಕ್ಕೆ ಅವಕಾಶ ಇದೆ. ಅದರ ಜತೆಗೆ, ಚುನಾವಣೆಯ ಕರ್ತವ್ಯಕ್ಕೆ ನಿಯೋಜನೆಗೊಳ್ಳುವ ಮತಗಟ್ಟೆ ಅಧಿಕಾರಿಗಳು, ಸಿಬ್ಬಂದಿ, ಸೂಕ್ಷ್ಮ ವೀಕ್ಷಕರು, ವಿಚಕ್ಷಣ ದಳ, ಕಣ್ಗಾವಲು ಸಿಬ್ಬಂದಿ ಮತದಾನ ಸೌಲಭ್ಯ ಕೇಂದ್ರಗಳಿಗೆ ತೆರಳಿ ಅಂಚೆ ಮತ ಪತ್ರಗಳ ಮೂಲಕ ಮತ ಚಲಾಯಿಸಬಹುದು. 

ಚುನಾವಣಾ ಕರ್ತವ್ಯಕ್ಕೆ ನಿಯೋಜಿತವಾದ ಅಧಿಕಾರಿಗಳು ಮತ್ತು ಸಿಬ್ಬಂದಿಯ ಜತೆಗೆ, 12 ವಿವಿಧ ಇಲಾಖೆಗಳ ಅಗತ್ಯ ಸೇವೆಗಳ  ಮತದಾರರಿಗೆ (ಎವಿಇಎಸ್‌) ಅಂಚೆ ಮತದಾನದ ವ್ಯವಸ್ಥೆ ಕಲ್ಪಿಸಲಾಗಿದೆ. ಚುನಾವಣಾ ಆಯೋಗವು ಇಂತಹ ಇಲಾಖೆಗಳನ್ನು ಅಗತ್ಯ ಸೇವೆಗಳೆಂದು ಪರಿಗಣಿಸಿದ್ದು, ಆಯಾ ಇಲಾಖಾವಾರು ನೀಡುವ ಪಟ್ಟಿಯ ಅನುಸಾರ ಅಂಚೆ ಮತದಾನದ ಮೂಲಕ ಮತ ಚಲಾಯಿಸಲು ಅವಕಾಶ ಕಲ್ಪಿಸಿದೆ. ಪಟ್ಟಿ ನೀಡಿದ ನಂತರ 12ಡಿ ನಮೂನೆಗಳಲ್ಲಿ ಭರ್ತಿ ಮಾಡಿ, ಕಳೆದ ಮಾರ್ಚ್‌ 22ರೊಳಗೆ ಸಲ್ಲಿಸಿದ್ದ ಅರ್ಹ ಮತದಾರರು ತಾವು ನೋಂದಣಿ ಮಾಡಿಕೊಂಡ ಲೋಕಸಭಾ ಕ್ಷೇತ್ರದಲ್ಲಿ ಸ್ಥಾಪಿಸಲಾದ ಪೋಸ್ಟಲ್ ವೋಟಿಂಗ್ ಸೆಂಟರ್‌ನಲ್ಲಿ (ಪಿವಿಸಿ) ಅಂಚೆ ಮತದಾನ ಮಾಡಿದ್ದಾರೆ.

ರಾಜ್ಯದಲ್ಲಿ ಮೊದಲ ಹಂತದಲ್ಲಿ ನಡೆಯುತ್ತಿರುವ 14 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ತೆರೆದಿರುವ ಅಂಚೆ ಮತದಾನ ಕೇಂದ್ರಗಳ ವ್ಯಾಪ್ತಿಯಲ್ಲಿ ಏ.19ರಿಂದಲೇ ಮತದಾನ ಆರಂಭವಾಗಿದೆ. ಈ ಅವಕಾಶವನ್ನು ಏ.25ರವರೆಗೂ ಚುನಾವಣಾ ಆಯೋಗ ವಿಸ್ತರಿಸಿದೆ. ಬೆಳಿಗ್ಗೆ 9ರಿಂದ ಸಂಜೆ 5ರ ವರೆಗೆ ಮತ ಚಲಾಯಿಸಲು ಅವಕಾಶವಿದೆ.

ರಾಜ್ಯದ ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ವಾಹನಗಳನ್ನು ಪಡೆಯಲಾಗುತ್ತಿದೆ. ಚುನಾವಣಾ ಕೆಲಸಕ್ಕೆ ನಿಯೋಜನೆಯಾಗುವ ಅಧಿಕಾರಿಗಳು, ವೀಕ್ಷಕರು, ಕಣ್ಗಾವಲು ತಂಡಗಳು ಹೆಚ್ಚಿನ ಸಂಖ್ಯೆಯಲ್ಲಿ ಹೊರ ಗುತ್ತಿಗೆ ಆಧಾರಿತ ವಾಹನಗಳನ್ನೇ ಬಳಕೆ ಮಾಡುತ್ತಿದ್ದಾರೆ. ಇಂತಹ ವಾಹನಗಳ ಚಾಲಕರು, ಸಹಾಯಕರಿಗೆ ಯಾವ ಕ್ಷೇತ್ರಗಳಿಗೆ ತೆರಳಬೇಕು. ಎಲ್ಲಿ ಕೆಲಸ ಎನ್ನುವ ಯಾವುದೇ ಪೂರ್ವಮಾಹಿತಿ ಇರುವುದಿಲ್ಲ. ಹಾಗಾಗಿ, ಅವರೆಲ್ಲ ಚುನಾವಣೆಯ ದಿನ ಮತದಾನ ಮಾಡಲು ಸಾಧ್ಯವಾಗುತ್ತಿಲ್ಲ. ಇಂಥವರ ಸಂಖ್ಯೆ 10 ಸಾವಿರಕ್ಕೂ ಹೆಚ್ಚಿದೆ.

‘ಚುನಾವಣಾ ಕೆಲಸಕ್ಕೆ ನಿಯೋಜನೆಯಾಗುವ ಸರ್ಕಾರಿ ಅಧಿಕಾರಿಗಳು, ನೌಕರರು, ಸರ್ಕಾರಿ ಕಾರು, ಜೀಪುಗಳ ಚಾಲಕರು, ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸಿಬ್ಬಂದಿಗೆ ಅಂಚೆ ಮತದಾನದ ಸೌಲಭ್ಯವಿದೆ. ಆದರೆ, ನಾನು 2008ರಿಂದ ಕಾರು ಚಾಲಕನಾಗಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಯಾಗುವ ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಯೊಬ್ಬರ (ಅಧಿಕಾರಿ ಬದಲಾಗುತ್ತಿರುತ್ತಾರೆ) ಜತೆ ಕೆಲಸ ಮಾಡುತ್ತಿದ್ದೇನೆ. ಅವರು ಸೂಚಿಸಿದಲ್ಲಿಗೆ ಕಾರು ಚಲಾಯಿಸುವುದಷ್ಟೇ ನನ್ನ ಕೆಲಸ. ಹಾಗಾಗಿ, ಚುನಾವಣೆಗಳಲ್ಲಿ ಒಮ್ಮೆಯೂ ಮತದಾನ ಮಾಡಲು ಸಾಧ್ಯವಾಗಿಲ್ಲ. ಚುನಾವಣಾ ಆಯೋಗ ನಮ್ಮಂಥವರಿಗೂ ಅಂಚೆ ಮತದಾನದ ಅವಕಾಶ ಕೊಡಬೇಕು’ ಎನ್ನುತ್ತಾರೆ ಹಾಸನದ ಕಾರು ಚಾಲಕ ರವಿ ನಾಯಕ್.

ಕರಾವಳಿ ಸೇರಿದಂತೆ ಕೆಎಸ್‌ಆರ್‌ಟಿಸಿ ಮತ್ತಿತರ ನಿಗಮಗಳ ಬಸ್‌ಗಳ ಕೊರತೆ ಇರುವ ಕಡೆ ಖಾಸಗಿ ಹಾಗೂ ಶಾಲಾ ಬಸ್‌ಗಳನ್ನು ಚುನಾವಣೆ ಕರ್ತವ್ಯಕ್ಕೆ ಬಳಸಿಕೊಳ್ಳಲಾಗುತ್ತದೆ. ಅಂತಹ ವಾಹನಗಳ 5 ಸಾವಿರಕ್ಕೂ ಹೆಚ್ಚು ಚಾಲಕರು ಮತ್ತು ಸಹಾಯಕರೂ ಮತದಾನದಿಂದ ವಂಚಿತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT