ಮಂಡ್ಯ: ಜೆಡಿಎಸ್ ಬಂಡಾಯ ಅಭ್ಯರ್ಥಿಗಳ ಮನವೊಲಿಸಲು ಎಚ್.ಡಿ.ದೇವೇಗೌಡ ಅವರ ಮಗ ಎಚ್.ಡಿ. ರಮೇಶ್ ಅವರು ಭಾನುವಾರ ನಡೆಸಿದ ಸಂಧಾನ ವಿಫಲವಾಯಿತು.
ಮಂಡ್ಯ ಕ್ಷೇತ್ರಕ್ಕೆ ಟಿಕೆಟ್ ಘೋಷಿಸಿ ಅಂತಿಮವಾಗಿ ಮನ್ಮುಲ್ ಅಧ್ಯಕ್ಷ ಬಿ.ಆರ್. ರಾಮಚಂದ್ರ ಅವರಿಗೆ ‘ಬಿ’ ಫಾರಂ ನೀಡಿದ್ದಕ್ಕೆ ಎಂ. ಶ್ರೀನಿವಾಸ್ ಅವರು ತಮ್ಮ ಶಾಸಕ ಸ್ಥಾನ ಹಾಗೂ ಪಕ್ಷಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಅವರ ಮೂವರು ಬೆಂಬಲಿಗರು ಬಂಡಾಯ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದು ‘ಸ್ವಾಭಿಮಾನಿ ಪಡೆ’ ಹೆಸರಿನಲ್ಲಿ ಪ್ರಚಾರ ಕೈಗೊಂಡಿದ್ದಾರೆ. ಬಂಡಾಯ ಶಮನ ಮಾಡಲು ಎಚ್.ಡಿ.ರಮೇಶ್ ಅವರು ಶ್ರೀನಿವಾಸ್ ಮನೆಗೆ ಭೇಟಿ ನೀಡಿ, ಪಕ್ಷದ ನಿರ್ಧಾರಕ್ಕೆ ಬೆಲೆ ಕೊಟ್ಟು ಅಭ್ಯರ್ಥಿ ಗೆಲುವಿಗೆ ಸಹಕರಿಸುವಂತೆ ಕೋರಿದರು.
ಇದನ್ನು ನಿರಾಕರಿಸಿದ ಶ್ರೀನಿವಾಸ್ ‘ನಮ್ಮ ಮೂವರು ಬೆಂಬಲಿಗರಲ್ಲಿ ಒಬ್ಬರು ಕಣದಲ್ಲಿ ಉಳಿಯಲಿದ್ದಾರೆ. ಸೋಮವಾರ ಬೆಳಿಗ್ಗೆ ನಿರ್ಧಾರ ಕೈಗೊಂಡು ಚುನಾವಣೆಗೆ ಹೋಗುವುದು ನಿಶ್ಚಿತ’ ಎಂದು ಸ್ಪಷ್ಟವಾಗಿ ಹೇಳಿದರು. ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಕೆ.ಟಿ. ಶ್ರೀಕಂಠೇಗೌಡ ಅವರು ಎಚ್.ಡಿ. ದೇವೇಗೌಡರಿಗೆ ಕರೆ ಮಾಡಿ ಶ್ರೀನಿವಾಸ್ ಅವರಿಗೆ ಮೊಬೈಲ್ ಫೋನ್ ಕೊಟ್ಟರು. ‘ಕ್ಷಮಿಸಿ ಅಪ್ಪಾಜಿ, ನಮ್ಮ ಮರ್ಯಾದೆ ಹೋಗಿದೆ, ಚುನಾವಣೆ ನಡೆಸುತ್ತೇವೆ’ ಎಂದು ಹೇಳಿ ಕರೆ ಸ್ಥಗಿತಗೊಳಿಸಿದರು.