ಗದಗ: ‘ಒಬ್ಬ ರಾಜಕಾರಣಿ. ಅದರಲ್ಲೂ ಜನಸೇವೆಯಲ್ಲಿ ತೊಡಗಿಸಿಕೊಂಡಿರುವವನು ಹೀಗೆ ಮಾಡಿದ್ದಾನೆ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಇದೆಲ್ಲಾ ವಿಕೃತ ಮನಸ್ಸಿನ ದೊಡ್ಡ ಅಪರಾಧ’ ಎಂದು ಸಚಿವ ಎಚ್.ಕೆ.ಪಾಟೀಲ ಅವರು ಪ್ರಜ್ವಲ್ ರೇವಣ್ಣ ವಿರುದ್ಧ ಕಿಡಿಕಾರಿದರು.
‘ಈ ಘಟನೆಯಿಂದಾಗಿ ರಾಜಕಾರಣದಲ್ಲಿ ಇರುವವರು ಮುಖ ಎತ್ತಿ ನಡೆಯುವುದು ಹೇಗೆ ಎಂಬ ದೊಡ್ಡ ಪ್ರಶ್ನೆ ಎದುರಾಗಿದೆ. ಈ ತರಹದ ಗುನ್ನೆ, ಈ ತರಹದ ವಿಕೃತ ಮನಸ್ಸುಗಳು ಇರುತ್ತವೆ ಎಂಬುದನ್ನು ಊಹಿಸಲೂ ಸಾಧ್ಯವಾಗುತ್ತಿಲ್ಲ’ ಎಂದು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.
‘ಅಶ್ಲೀಲ ವಿಡಿಯೊಗಳ ಪೆನ್ ಡ್ರೈವ್ ಬಿಡುಗಡೆ ಹಿಂದೆ ಕಾಂಗ್ರೆಸ್ ನಾಯಕರೊಬ್ಬರ ಕೈವಾಡ ಇದೆ ಎಂಬ ವಿರೋಧ ಪಕ್ಷಗಳ ಆರೋಪ ಆಧಾರರಹಿತವಾದದ್ದು. ಜೆಡಿಎಸ್ ಪಕ್ಷದವರೇ ಆದ ಎಚ್.ಡಿ.ಕುಮಾರಸ್ವಾಮಿ, ತಪ್ಪು ಮಾಡಿದವರು ಶಿಕ್ಷೆ ಅನುಭವಿಸಬೇಕು. ಉಪ್ಪು ತಿಂದವರು ನೀರು ಕುಡಿಯಲೇಬೇಕು. ನಮಗೂ ಅವರ ಕುಟುಂಬಕ್ಕೂ ಸಂಬಂಧವೇ ಇಲ್ಲ ಅಂದಿದ್ದಾರೆ. ಅವರ ಮಾತುಗಳ ಅರ್ಥ ಏನು? ಇದರಿಂದಲೇ ಎಲ್ಲವೂ ಸ್ಪಷ್ಟವಾಗಿ ತಿಳಿಯುತ್ತದೆ’ ಎಂದು ಹೇಳಿದರು.