ಚಾಮರಾಜನಗರ: ‘ಇದೇ 26ರಂದು ನಡೆಯಲಿರುವ ಮತದಾನದ ಸಂದರ್ಭದಲ್ಲಿ ಹಿಂದೂಗಳು ಒಂದು ಕ್ಷಣ ಮೈಮರೆತರೆ, ರಾಜ್ಯದಲ್ಲಿ ಜೈ ಶ್ರೀರಾಮ್, ಭಾರತ ಮಾತಾ ಕೀ ಜೈ ಎಂದು ಘೋಷಣೆ ಕೂಗುವುದಕ್ಕೆ ಆಗುವುದಿಲ್ಲ. ಅಲ್ಲಾಹು ಅಕ್ಬರ್ ಎಂದು ಕೂಗಬೇಕಾಗುತ್ತದೆ’ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಎಂ.ರುದ್ರೇಶ್ ಗುರುವಾರ ಹೇಳಿದರು.
ಬೆಂಗಳೂರಿನಲ್ಲಿ ಜೈಶ್ರೀರಾಮ್ ಎಂದು ಕೂಗಿದವರ ಮೇಲೆ ನಡೆದ ಹಲ್ಲೆ ಪ್ರಕರಣದ ಮಧ್ಯೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ‘ಈ ಘಟನೆಯನ್ನು ನೋಡಿದರೆ ನಾವು ಕರ್ನಾಟಕದಲ್ಲಿ ಇದ್ದೇವಾ ಅಥವಾ ಪಾಕಿಸ್ತಾನದಲ್ಲಿ ಇದ್ದೇವಾ ಎಂದು ಅನಿಸುತ್ತದೆ. ಇಲ್ಲಿ ಜೈ ಶ್ರೀರಾಮ್ ಎಂದು ಹೇಳುವುದಕ್ಕೆ ಸ್ವಾತಂತ್ರ್ಯ ಇಲ್ಲ. ನಾಳೆ ದಿನ ಕಾಂಗ್ರೆಸ್ ಗೆದ್ದರೆ ಈ ರೀತಿ ಕೂಗುವುದಕ್ಕೆ ಆಗುವುದಿಲ್ಲ’ ಎಂದರು.
‘ಇವತ್ತು ಹಿಂದೂಗಳ ಮೇಲೆ ಹಲ್ಲೆ ಆಗುತ್ತಿದೆ. ಇಲ್ಲಿ ಬಹುಸಂಖ್ಯಾತರಿಗೆ ರಕ್ಷಣೆ ಇಲ್ಲ. ಕಾಂಗ್ರೆಸ್ ಗೆದ್ದರೆ ಹಿಂದೂಗಳ ಮಕ್ಕಳು ಎಲ್ಲಿಗೆ ಹೋಗಬೇಕು. ಹಿಂದೂಗಳು ಉದ್ಧಾರ ಆಗಬೇಕು ಎಂದಿದ್ದರೆ ಬಿಜೆಪಿಗೆ ಎಲ್ಲರೂ ಮತ ಹಾಕಬೇಕು’ ಎಂದು ರುದ್ರೇಶ್ ಹೇಳಿದರು.
'ಕಾಂಗ್ರೆಸ್ ಪಕ್ಷವು ಕೆಟ್ಟ ಮುಸ್ಲಿಮರನ್ನು ಓಲೈಸಿಕೊಂಡು ಬಂದಿದೆಯೇ ವಿನಾ ಅಬ್ದುಲ್ ಕಲಾಂ ಅವರಂತಹ ಒಳ್ಳೆಯ ಮುಸಲ್ಮಾನರನ್ನಲ್ಲ. ನಾಳೆ ದಿನ ಚಾಮರಾಜನಗರದ ಹಿಂದೂ ಮಕ್ಕಳ ಮೇಲೆ ಹಲ್ಲೆಯೂ ಆಗುತ್ತದೆ, ಕೊಲೆಯೂ ನಡೆಯುತ್ತದೆ’ ಎಂದು ಹೇಳಿದರು.