ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ | ‘ಸೋತು’ ಗೆದ್ದ ಪ್ರಭಾವಿಗಳ ಪುತ್ರರು

Last Updated 4 ಏಪ್ರಿಲ್ 2023, 6:19 IST
ಅಕ್ಷರ ಗಾತ್ರ

ಕಲಬುರಗಿ: ರಾಜಕೀಯದಲ್ಲಿ ತಮ್ಮ ಮಕ್ಕಳಿಗೂ ರಾಜಕಾರಣದ ಪಟ್ಟುಗಳನ್ನು ಪರಿಚಯಿಸಿ ಭದ್ರವಾದ ರಾಜಕೀಯ ಬುನಾದಿ ಹಾಕಿಕೊಡಬೇಕು ಎಂಬ ಪ್ರಭಾವಿ ಮುಖಂಡರ ಲೆಕ್ಕಾಚಾರವನ್ನು ಮತದಾರರು ತಲೆ ಕೆಳಗಾಗುವಂತೆ ಮಾಡಿ, ಸ್ಪರ್ಧಿಸಿದ್ದ ಮೊದಲ ಚುನಾವಣೆಯಲ್ಲಿ ಅವರ ಪುತ್ರರಿಗೆ ಸೋಲಿನ ಕಹಿ ಉಣಿಸಿದ್ದಾರೆ.

ತೊಗರಿ ಕಣಜವು ರಾಜ್ಯ ಮತ್ತು ರಾಷ್ಟ್ರಮಟ್ಟದ ರಾಜಕೀಯ ನಾಯಕರನ್ನು ಕೊಟ್ಟಿದ್ದರೂ ಅವರ ಮಕ್ಕಳಿಗೆ ಪರಾಜಯದ ಮೂಲಕವೇ ರಾಜಕೀಯದ ಚದುರಂಗದ ಪಾಠ ಮಾಡಿದೆ. ಇದಕ್ಕೆ ಮಾಜಿ ಮುಖ್ಯಮಂತ್ರಿಗಳು, ಸಚಿವರು, ಎಐಸಿಸಿ ಅಧ್ಯಕ್ಷರ ಪುತ್ರ ಹೊರತಾಗಿಲ್ಲ.

ಜೇವರ್ಗಿ ಕ್ಷೇತ್ರದಿಂದ ಸತತ ಎಂಟು ಬಾರಿ ಗೆದ್ದು ಮುಖ್ಯಮಂತ್ರಿ ಗದ್ದುಗೆ ಏರಿದ್ದ ದಿ. ಎನ್‌.ಧರ್ಮಸಿಂಗ್ ಅವರ ಪುತ್ರ ಡಾ.ಅಜಯ್ ಸಿಂಗ್ ಅವರು ಪ್ರಥಮಬಾರಿ ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುಂಡರು.

ಶಾಸಕ ಚಂದ್ರಶೇಖರ ಪಾಟೀಲ ರೇವೂರ ಅವರ ಅಕಾಲಿಕ ನಿಧನದ ಬಳಿಕ 2010ರಲ್ಲಿ ಉಪಚುನಾವಣೆ ನಡೆಯಿತು. ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಅರುಣಾ ಚಂದ್ರಶೇಖರ ಅವರ ವಿರುದ್ಧ ಡಾ.ಅಜಯ್ ಸಿಂಗ್ ಅವರು 3ನೇ ಸ್ಥಾನ ಪಡೆದು ಪರಾಭವಗೊಂಡರು.

2013ರ ಸಾರ್ವತ್ರಿಕ ಚುನಾವಣೆಯಲ್ಲಿ ಜೇವರ್ಗಿಯಿಂದ ಸ್ಪರ್ಧಿಸಿ ಬಿಜೆಪಿಯ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಅವರನ್ನು 36,700 ಮತಗಳಿಂದ ಸೋಲಿಸಿ, ಸತತ ಎರಡು ಬಾರಿ ಶಾಸಕರಾದರು.

ಎರಡು ಬಾರಿ ಮುಖ್ಯಮಂತ್ರಿಯಾದ ದಿ.ವೀರೇಂದ್ರ ಪಾಟೀಲ ಅವರ ಪುತ್ರ ಕೈಲಾಸನಾಥ ಪಾಟೀಲ ಅವರಿಗೂ ಮೊದಲ ಬಾರಿಗೆ ವಿಜಯಲಕ್ಷ್ಮಿ ಒಲಿಯಲಿಲ್ಲ.

ಕೈಲಾಸನಾಥ ಅವರು 1994ರಲ್ಲಿ ಚಿಂಚೋಳಿ ಕ್ಷೇತ್ರದಿಂದ ಚುನಾವಣೆ ಅಖಾಡಕ್ಕೆ ಧುಮುಕಿ ವೈಜನಾಥ ಪಾಟೀಲ ಅವರ ವಿರುದ್ಧ 39,051 ಮತಗಳ ದಾಖಲೆಯ ಅಂತರದಲ್ಲಿ ಸೋತರು.

1999ರಲ್ಲಿ ಅದೇ ವೈಜನಾಥರ ವಿರುದ್ಧ ಕೈಲಾಸನಾಥ ಅವರು 26,263 ಮತಗಳಿಂದ ಗೆದ್ದು ವಿಧಾನಸೌಧವನ್ನು ಪ್ರವೇಶಿಸಿದರು. ಚಿಂಚೋಳಿ ಕ್ಷೇತ್ರ ಮೀಸಲಾಗಿ ಬದಲಾ ದ್ದರಿಂದ 2013ರಲ್ಲಿ ಕಲಬು ರಗಿ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವ ಗೊಂಡರು.

ಕಲಬುರಗಿ ಗ್ರಾಮೀಣ ಕ್ಷೇತ್ರದೊಂದಿಗೆ (2008) ವಿಲೀನಕ್ಕೂ ಮುನ್ನ ಕಮಲಾಪುರ ಮೀಸಲು ಕ್ಷೇತ್ರವಾಗಿತ್ತು. ಈ ಕ್ಷೇತ್ರದಿಂದ ಸತತ ಎರಡು ಬಾರಿ ಗೆದ್ದ ಜಿ.ರಾಮಕೃಷ್ಣ ಅವರು ವೀರಪ್ಪ ಮೊಯ್ಲಿ ಅವರ ಸಚಿವ ಸಂಪುಟದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದರು.

ರಾಮಕೃಷ್ಣ ಅವರ ಪುತ್ರ ವಿಜಯಕುಮಾರ ಜಿ. ರಾಮಕೃಷ್ಣ ಅವರು 2018ರಲ್ಲಿ ಕಲಬುರಗಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿಯ ಬಸವರಾಜ ಮತ್ತಿಮಡು ಅವರ ವಿರುದ್ಧ 12,386 ಮತಗಳ ಅಂತರದಿಂದ ಸೋಲು ಕಂಡರು.

1962ರಲ್ಲಿ ಕಲಬುರಗಿ ವಿಧಾನಸಭಾ ಕ್ಷೇತ್ರದಲ್ಲಿ ಸಿಪಿ ಐನಿಂದ ಸ್ಪರ್ಧಿಸಿ ಗಂಗಾಧರ ನಮೋಶಿ ಶಾಸಕರಾದರು. ಅವರ ಪುತ್ರ ಶಶೀಲ್ ಜಿ.ನಮೋಶಿ ಅವರು ಈ ಹಿಂದಿನ ಕಲಬುರಗಿ ಕ್ಷೇತ್ರದಿಂದ 1994ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಕಾಂಗ್ರೆಸ್‌ನ ಖಮರುಲ್ ಇಸ್ಲಾಂ ವಿರುದ್ಧ ಸೋತರು.

ಕಲಬುರಗಿ ದಕ್ಷಿಣ ಕ್ಷೇತ್ರದಲ್ಲಿ 2010ರ ಉಪಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದರೂ ಪರಾಭ ವಗೊಳ್ಳಬೇಕಾಯಿತು. ಆದರೆ, ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದರು.

ಖರ್ಗೆ ಪುತ್ರನಿಗೂ ತಪ್ಪದ ಸೋಲು

ಮಲ್ಲಿಕಾರ್ಜುನ ಖರ್ಗೆ ಅವರು ಗುರುಮಠಕಲ್ ವಿಧಾನಸಭಾ ಮೀಸಲು ಕ್ಷೇತ್ರದಿಂದ ಸತತ ಎಂಟು ಬಾರಿ ಹಾಗೂ ಚಿತ್ತಾಪುರ (2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ) ಕ್ಷೇತ್ರದಿಂದ ಒಮ್ಮೆ ಗೆದ್ದರು. ವಿವಿಧ ಖಾತೆಗಳನ್ನು ನಿಭಾಯಿಸಿ, 2009ರ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಕೇಂದ್ರ ಸಚಿವರೂ ಆದರು.ಆದರೆ, ಚಿತ್ತಾಪುರ ಉಪಚುನಾವಣೆಯಲ್ಲಿ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿಯ ವಾಲ್ಮೀಕಿ ನಾಯಕ ವಿರುದ್ಧ ಸೋಲು ಅನುಭವಿಸಿದರು. 2013 ಮತ್ತು 2018ರ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ವಾಲ್ಮೀಕಿ ನಾಯಕ ವಿರುದ್ಧ ಗೆಲುವು ಸಾಧಿಸಿದರು. ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಐಟಿ–ಬಿಟಿ ಹಾಗೂ ಪ್ರವಾಸೋದ್ಯಮ ಸಚಿವರೂ ಆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT