ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿರುವ ಗ್ರಾಮಸ್ಥರು, ‘ಕಳೆದ ಬಾರಿ ಊರುಬಗೆ, ಹಂತೂರು, ತ್ರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸತತ ಮೂರು ತಿಂಗಳ ಕಾಲ ಬಿಡುವಿಲ್ಲದೇ ಸುರಿದ ಅಪಾರ ಮಳೆಯಿಂದಾಗಿ ಕಾಫಿ, ಕಾಳುಮೆಣಸು, ಭತ್ತ, ಏಲಕ್ಕಿ ಬೆಳೆಗಳೆಲ್ಲವೂ ಹಾನಿಯಾಗಿದ್ದವು. ಅಲ್ಲದೇ ಕಾಳು ಮೆಣಸು ಬಳ್ಳಿಗಳು ಕೊಳೆತು ಹೋಗಿದ್ದು, ಏಲಕ್ಕಿ ಗಿಡಗಳು ಕೂಡ ಶೀತ ಹೆಚ್ಚಳವಾಗಿ ಕರಗಿ ಹೋಗಿದ್ದವು. ರೈತರಿಗಾದ ನಷ್ಟವನ್ನು ತುಂಬಿ ಕೊಡುವ ಸಲುವಾಗಿ ಸರ್ಕಾರವು ರೈತರಿಂದ ಅರ್ಜಿಯನ್ನು ಸ್ವೀಕರಿಸಿತ್ತು. ಆದರೆ, ಅರ್ಜಿ ಸಲ್ಲಿಸಿ ವರ್ಷ ಕಳೆಯುತ್ತಿದ್ದರೂ ಅತಿವೃಷ್ಟಿ ಪರಿಹಾರವನ್ನು ವಿತರಿಸಿಲ್ಲದಿರುವುದನ್ನು ಖಂಡಿಸಿ ಈ ಭಾಗದ ಎಲ್ಲಾ ಮತಗಟ್ಟೆಗಳಲ್ಲಿ ಮತದಾನ ಬಹಿಷ್ಕಾರ ಮಾಡಲು ಸರ್ವ ಪಕ್ಷಗಳ ಮುಖಂಡರು ಸೇರಿ ತೀರ್ಮಾನಕ್ಕೆ ಬರಲಾಗಿತ್ತು’ ಎಂದಿದ್ದಾರೆ.