ರಾಗಿಮುದ್ದೆ ಉಣ್ಣುವ ಸುತ್ತವೇ ಕಥೆ ಹೆಣೆದಿರುವ ‘ಆನೆಬಲ’ ಚಿತ್ರ ಫೆಬ್ರುವರಿ ಮೊದಲ ವಾರ ಬಿಡುಗಡೆಯಾಗಲಿದೆ. ಈ ಚಿತ್ರ ನಿರ್ದೇಶಿಸಿರುವುದು ಸೂನಗಹಳ್ಳಿ ರಾಜು. ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯ ನೊಗವನ್ನು ಅವರೇ ಹೊತ್ತಿದ್ದಾರೆ. ಸಂಕ್ರಾಂತಿ ಹಬ್ಬದಂದು ಟ್ರೇಲರ್ ಬಿಡುಗಡೆಗೆ ಚಿತ್ರತಂಡ ಸಿದ್ಧತೆ ನಡೆಸಿದೆ.
ಗ್ರಾಮವೊಂದರ ಆಗುಹೋಗುಗಳಲ್ಲಿ ಯುವಕರ ಗುಂಪಿನದೇ ಪ್ರಧಾನ ಪಾತ್ರ. ಒಮ್ಮೆ ಗ್ರಾಮದಲ್ಲಿ ರಾಗಿಮುದ್ದೆ ಉಣ್ಣುವ ಸ್ಪರ್ಧೆ ನಡೆಯುತ್ತದೆ. ಆಗ ಊರಿನ ಮರ್ಯಾದೆ ಹೋಗುವ ಪರಿಸ್ಥಿತಿ ಎದುರಾಗುತ್ತದೆ. ಯುವಜನರು ಹೇಗೆ ಊರಿನ ಗೌರವ ಕಾಪಾಡುತ್ತಾರೆ ಎನ್ನುವುದೇ ಈ ಚಿತ್ರದ ಹೂರಣ.
ನೂರಕ್ಕೂ ಹೆಚ್ಚು ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಕಂಠದಾನ ಕಲಾವಿದರನ್ನು ಬಳಸದೇ ಓರಿಜಿನಲ್ ವಾಯ್ಸ್ಗೋಸ್ಕರ ಇಡೀ ಚಿತ್ರತಂಡ ಶ್ರಮಪಟ್ಟು ಡಬ್ಬಿಂಗ್ ಮಾಡಿದೆಯಂತೆ. ಶತಾಯುಷಿ ಅಜ್ಜಿಯೊಬ್ಬರು ತಮ್ಮ ಪಾತ್ರಕ್ಕೆ ತಾವೇ ಡಬ್ಬಿಂಗ್ ಮಾಡಿರುವುದು ಇದರ ಮತ್ತೊಂದು ವಿಶೇಷ ಎನ್ನುತ್ತಾರೆ ನಿರ್ದೇಶಕರು.
ವಿ. ನಾಗೇಂದ್ರಪ್ರಸಾದ್ ಬರೆದಿರುವ ‘ಮುದ್ದೆ ಮುದ್ದೆ ಹಾಡು’ ಹಾಗೂ ಸೂನಗಹಳ್ಳಿ ರಾಜು ಬರೆದಿರುವ ‘ಮಳವಳ್ಳಿ ಜಾತ್ರೆಲಿ ತುಂಡು ಹೈಕ್ಳಾ ದರ್ಬಾರು’ ಹಾಡಿಗೆ ಯುಟ್ಯೂಬ್ನಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವುದು ಚಿತ್ರತಂಡದ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ.
ಯೋಗರಾಜ್ ಭಟ್ ಅವರು ಒಂದು ಹಾಡಿಗೆ ಸಾಹಿತ್ಯ ರಚಿಸಿದ್ದಾರೆ. ಸಿನಿಮಾದ ಆರಂಭಕ್ಕೆ ಕಂದೇಗಾಲದ ಪುಟ್ಟಮ್ಮ ಮತ್ತು ತಂಡದವರು ಜನಪದ ಹಾಡನ್ನೇ ಹಾಡಿದ್ದಾರಂತೆ.
ಚಿತ್ರದ ನಾಲ್ಕು ಹಾಡುಗಳಿದ್ದು, ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜಿಸಿದ್ದಾರೆ. ನಟ ಸಾಗರ್ ಜನಪದ ಸಂಸ್ಕೃತಿ ಉಳಿಸುವ ನಾಯಕನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ನಾಯಕಿ ರಕ್ಷಿತಾ ಅವರದು ಹಳ್ಳಿಯ ಜಂಬದ ಹುಡುಗಿಯ ಪಾತ್ರ.
ಛಾಯಾಗ್ರಹಣ ಜೆ.ಟಿ. ಬೆಟ್ಟೇಗೌಡ ಕೀಲಾರ ಅವರದು. ಬಿ.ಎಸ್. ಕೆಂಪರಾಜು ಅವರ ಸಂಕಲನವಿದೆ. ಕಲೈ ನೃತ್ಯ ನಿರ್ದೇಶಿಸಿದ್ದಾರೆ. ಈಶ್ವರಿಕುಮಾರ್ ಅವರ ಕಲಾ ನಿರ್ದೇಶನವಿದೆ. ಎ.ವಿ. ವೇಣುಗೋಪಾಲ್ ಅಡಕಿಮಾರನಹಳ್ಳಿ ಬಂಡವಾಳ ಹೂಡಿದ್ದಾರೆ. ಗೌತಂ, ಚಿರಂಜೀವಿ, ಹರೀಶ್ ಶೆಟ್ಟಿ, ಕೀಲಾರ ಉದಯ್, ಸುಮಾ, ರೂಪಾ, ಮುತ್ತುರಾಜು ತಾರಾಗಣದಲ್ಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.