ಹಿರಿಯ ನಟ ಶಶಿಕುಮಾರ್ ಪುತ್ರ ಅಕ್ಷಿತ್ಗೆ ಒಂದರ ಹಿಂದೊಂದರಂತೆ ಅವಕಾಶ ಅರಸಿ ಬರುತ್ತಿವೆ. ‘ಬಳ್ಳಾರಿ ದರ್ಬಾರ್’ ಖ್ಯಾತಿಯ ಸ್ಮೈಲ್ ಶ್ರೀನು ಅವರ ನಿರ್ದೇಶನದ ‘ಓ ಮೈ ಲವ್’ ಚಿತ್ರದಲ್ಲಿ ನಾಯಕನಾಗಿ ಬಣ್ಣ ಹಚ್ಚುತ್ತಿದ್ದಾರೆ. ಅಕ್ಷಿತ್ ಜೊತೆಗೆ ನಾಯಕಿಯಾಗಿ ಸನಾದಿ ಅಪ್ಪಣ್ಣ ಕುಟುಂಬದ ಕುಡಿ ಕೀರ್ತಿ ಕಲಕೇರಿ ಅಭಿನಯಿಸುತ್ತಿದ್ದಾರೆ.
ಈ ಹಿಂದೆ ‘ತೂಫಾನ್’, ‘ಬಳ್ಳಾರಿ ದರ್ಬಾರ್’ ಹಾಗೂ ‘18 ಟು 25’ ಚಿತ್ರಗಳನ್ನು ನಿರ್ದೇಶಿಸಿದ್ದ ಸ್ಮೈಲ್ಶ್ರೀನು ಈಗ ಮತ್ತೊಂದು ವಿಭಿನ್ನ ಪ್ರೇಮಕಥೆಯನ್ನು ‘ಓ ಮೈ ಲವ್’ನಲ್ಲಿ ನಿರೂಪಿಸಲು ಹೊರಟಿದ್ದಾರೆ.
ರೊಮ್ಯಾಂಟಿಕ್ ಜಾನರ್ ಕಥಾಹಂದರದ ಈ ಚಿತ್ರದಲ್ಲಿ ಹದಿಹರೆಯದ ವಯಸಿನಲ್ಲಿ ಯುವ ಹೃದಯಗಳ ಮನದಲ್ಲಿ ಉಂಟಾಗುವ ತಳಮಳ, ಪ್ರೀತಿ, ಪ್ರೇಮದ ಕುರಿತು ಹೇಳಲಿದ್ದಾರಂತೆ.
ಜಿಸಿಬಿ ರಾಮಾಂಜಿನಿ ಈ ಚಿತ್ರದ ಕಥೆ ಬರೆಯುವ ಜತೆಗೆ ಜಿಸಿಬಿ ಪ್ರೊಡಕ್ಷನ್ಸ್ ಮೂಲಕ ಚಿತ್ರ ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ಚಿತ್ರಕಥೆ, ಸಂಭಾಷಣೆ ನಿರ್ದೇಶಕರದೇ. ನವಿರು ಪ್ರೇಮಕಥೆಯ ಜೊತೆಗೆ ಕೌಟುಂಬಿಕ ಎಳೆಗಳು ಹಾಗೂ ಹಾಸ್ಯದ ಅಂಶಗಳು ಮಿಳಿತಗೊಂಡಿದ್ದು, ಒಂದು ಸೊಗಸಾದ ಪ್ರೇಮಕಥೆಯನ್ನು ಹೀಗೂ ತೆರೆಮೇಲೆ ತರಲು ಸಾಧ್ಯವೆಂದು ನಿರೂಪಿಸಲಿದ್ದೇವೆ ಎನ್ನುವುದು ಸ್ಮೈಲ್ಶ್ರೀನು ಅವರ ಅನಿಸಿಕೆ.
ಈ ಚಿತ್ರ ಬಿಗ್ಬಜೆಟ್ನಲ್ಲಿ ತಯಾರಾಗುತ್ತಿದ್ದು, ಚಿತ್ರದ ಮೇಕಿಂಗ್, ಹಾಡು ಹಾಗೂ ತಾರಾಬಳಗದಲ್ಲೂ ಅದ್ಧೂರಿಯಾಗಿರಲಿದೆ.
ಸಾಧು ಕೋಕಿಲ, ದೀಪಿಕಾ ಆರಾಧ್ಯ ಅವರಂತಹ ಕಲಾವಿದರು ಇದರಲ್ಲಿ ನಟಿಸಲಿದ್ದಾರೆ ಎತ್ತಾರೆ ಶ್ರೀನು.
ವಿ.ನಾಗೇಂದ್ರಪ್ರಸಾದ್ ಸಾಹಿತ್ಯ, ಚರಣ್ ಅರ್ಜುನ್ ಸಂಗೀತ, ರಿಯಲ್ ಸತೀಶ್ ಸಾಹಸ ನಿರ್ದೇಶನ, ಆಕಾಶ್ಕುಮಾರ್ ಚವನ್ ಸಹನಿರ್ದೇಶನ ಈ ಚಿತ್ರಕ್ಕಿದೆ.
ಬೆಂಗಳೂರು, ಮಂಗಳೂರು, ಮಡಿಕೇರಿ ಸೇರಿದಂತೆ ರಾಜ್ಯದ ಸುಂದರ ತಾಣಗಳು ಹಾಗೂ ಹೈದರಾಬಾದ್ನಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ರೂಪಿಸಿದೆ.
ಅಕ್ಷಿತ್ ಅರಸಿ ಬಂದ ಅವಕಾಶಗಳು
ಅಕ್ಷಿತ್ ಶಶಿಕುಮಾರ್ ಬಹುಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ‘ಸೀತಾಯಣ’ ಚಿತ್ರದ ಮೂಲಕ ನಾಯಕನಾಗಿ ಬಣ್ಣದ ಲೋಕಕ್ಕೆ ಅಡಿ ಇಟ್ಟವರು. ಈ ಚಿತ್ರ ಪೂರ್ಣಗೊಂಡು ಬಿಡುಗಡೆಯ ಹೊಸ್ತಿಲಿನಲ್ಲಿದೆ. ತ್ರಿಭಾಷೆಗಳಲ್ಲಿ ನಿರ್ಮಾಣವಾಗಲಿರುವ ‘ಸಮಿತ್’ ಚಿತ್ರದಲ್ಲೂ ಅಕ್ಷಿತ್ ನಾಯಕನಾಗಿ ನಟಿಸುತ್ತಿದ್ದಾರೆ.
ಇದರಲ್ಲಿ ಚಾಂದಿನಿ ಹಾಗೂ ಅನುವರ್ಣ ನಾಯಕಿಯರಾಗಿ ತೆರೆ ಹಂಚಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಸತೀಶ್ ಮಲೆಂಪಾಟಿ ನಿರ್ದೇಶಿಸಲಿದ್ದಾರೆ. ಕನ್ನಡ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಈ ಚಿತ್ರ ನಿರ್ಮಿಸಿ, ಮಲಯಾಳಂಗೆ ಡಬ್ ಮಾಡುವ ಯೋಜನೆಯಲ್ಲಿದೆ ಚಿತ್ರ ತಂಡ.
‘ಮೊಡವೆ’ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಡಲು ತಯಾರಿ ನಡೆಸಿದ್ದ ಅಕ್ಷಿತ್ಗೆ ಅದು ಕೈಗೂಡಿರಲಿಲ್ಲ. ಪ್ರಯತ್ನ ಕೈಬಿಡದ ಅಕ್ಷಿತ್ಗೆ ‘ಸೀತಾಯಣ’, ‘ಸಮಿತ್’ ಹಾಗೂ ‘ಓ ಮೈ ಲವ್’ ಅರಸಿ ಬಂದಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.