ಹೈದರಾಬಾದ್: ತೆಲುಗಿನ ಸ್ಟಾರ್ ನಟರಾದ ನಂದಮೂರಿ ಬಾಲಕೃಷ್ಣ – ಮಹೇಶ್ ಬಾಬು ಒಂದೇ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಕೊರಟಾಲ ಶಿವ ಅವರ ನಿರ್ದೇಶನದಲ್ಲಿ ಚಿತ್ರ ಮೂಡಿಬರಲಿದ್ದು, ಚಿತ್ರದ ಹೆಸರು ಇನ್ನಷ್ಟೇ ಪ್ರಕಟವಾಗಬೇಕಿದೆ. ಈ ಇಬ್ಬರು ನಟರು ಒಟ್ಟಿಗೆ ಒಂದೇ ಸಿನಿಮಾದಲ್ಲಿ ನಟಿಸುತ್ತಿರುವುದು ಇದೇ ಮೊದಲು.
ಮಹೇಶ್ ಬಾಬು, ವೆಂಕಟೇಶ್ ಅವರೊಂದಿಗೆ 'ಸೀತಮ್ಮ ವಕಿಟ್ಲೊ ಸಿರಿಮಲ್ಲೆ ಚೆಟ್ಟು' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
ಕೊರಟಾಲ ಶಿವ ನಿರ್ದೇಶನದ 'ಭರತ್ ಅನೇ ನೇನು' ಚಿತ್ರದಲ್ಲಿ ಮಹೇಶ್ ಬಾಬು ನಟಿಸಿದ್ದರು. ಈ ಚಿತ್ರ ಹಿಟ್ ಆಗುವ ಮೂಲಕ ಹಣ ಗಳಿಕೆಯಲ್ಲೂ ಸಖತ್ ಸದ್ದು ಮಾಡಿತ್ತು. ‘ಜನತಾ ಗ್ಯಾರೇಜ್’ ಚಿತ್ರದಲ್ಲಿ ಜ್ಯೂನಿಯರ್ ಎನ್ಟಿಆರ್ ನಟಿಸಿದ್ದರು. ಈ ಚಿತ್ರ ಕೊರಟಾಲ ಶಿವ ಅವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟಿತ್ತು.
ಸದ್ಯ ಬಾಲಕೃಷ್ಣ ಅವರು ‘ಅಖಂಡ’ ಸಿನಿಮಾದಲ್ಲಿ ತೊಡಗಿದ್ದಾರೆ. ಖ್ಯಾತ ನಿರ್ದೇಶಕ ಬಾಯಿಪಾಟು ಸೀನು ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ರವೀಂದ್ರ ರೆಡ್ಡಿ ನಿರ್ಮಾಣ ಮಾಡುತ್ತಿದ್ದಾರೆ. ನಾಯಕಿಯಾಗಿ ಪ್ರಗ್ಯಾ ಜೈಸ್ವಾಲ್ ಕಾಣಿಸಿಕೊಂಡರೆ, ಶ್ರೀಕಾಂತ್ ಖಳನಾಯಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ.