ನಟ ಜಗ್ಗೇಶ್ ಪುತ್ರ ಯತಿರಾಜ್ ಪ್ರಯಾಣಿಸುತ್ತಿದ್ದ ಕಾರು ಅಪಘಾತ: ಅಪಾಯದಿಂದ ಪಾರು

ಚಿಕ್ಕಬಳ್ಳಾಪುರ: ನಟ ಜಗ್ಗೇಶ್ ಅವರ ಕಿರಿಯ ಪುತ್ರ ಯತಿರಾಜ್ ಪ್ರಯಾಣಿಸುತ್ತಿದ್ದ ಕಾರು ನಗರ ಹೊರವಲಯದ ಅಗಲಗುರ್ಕಿ ಬಳಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 44ರಲ್ಲಿ (ಬೆಂಗಳೂರು–ಹೈದರಾಬಾದ್) ಗುರುವಾರ ಅಪಘಾತಕ್ಕೀಡಾಯಿತು.
ಯತಿರಾಜ್ ಬಾಗೇಪಲ್ಲಿ ಕಡೆಯಿಂದ ಬೆಂಗಳೂರಿನತ್ತ ಪ್ರಯಾಣಿಸುತ್ತಿದ್ದರು. ಈ ವೇಳೆ ದ್ವಿಚಕ್ರವಾಹನ ಸವಾರರೊಬ್ಬರು ಹೆದ್ದಾರಿಯಲ್ಲಿ ತಿರುವು ತೆಗೆದುಕೊಳ್ಳಲು (ಯೂಟರ್ನ್) ಮುಂದಾಗಿದ್ದಾರೆ. ಆಗ ದ್ವಿಚಕ್ರವಾಹನ ತಪ್ಪಿಸಲು ಯತಿರಾಜ್ ಮುಂದಾಗಿದ್ದು ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಮೂರು ಪಲ್ಟಿಯಾಗಿದೆ. ಕಾರಿನಿಂದ ಕೆಳಕ್ಕೆ ಬಿದ್ದ ಯತಿರಾಜ್ ಅವರನ್ನು ಸ್ಥಳೀಯರು ಉಪಚರಿಸಿದರು. ಅವರಿಗೆ ಸಣ್ಣಪುಟ್ಟಗಾಯಗಳಾಗಿದ್ದವು. ಕಾರಿನ ಮುಂಭಾಗಕ್ಕೆ ಸಂಪೂರ್ಣ ಹಾನಿಯಾಗಿದೆ.
ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಲಾಯಿತು. ಈ ವೇಳೆ ಪೊಲೀಸರು ವಿಚಾರಣೆ ನಡೆಸಿದರು.
‘ಅಪಘಾತ ನಡೆದ ಸ್ಥಳದಲ್ಲಿ ಬೆಸ್ಕಾಂನ ಮೂರು ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ಈ ಪ್ರತ್ಯಕ್ಷದರ್ಶಿಗಳು ಅಪಘಾತಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದಾರೆ. ಯತಿರಾಜ್ ಅವರಿಗೆ ಮುಖ, ಹಣೆ ಮತ್ತು ಕಾಲಿಗೆ ಗಾಯವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ತೆರಳಿದ್ದಾರೆ. ಅವರು ಗುಣವಾದ ನಂತರ ಮುಂದಿನ ಪ್ರಕ್ರಿಯೆಗಳನ್ನು ನಡೆಸಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದ್ದಾರೆ.
ಕೊರೋನ ಬಂದಾಗಿನಿಂದ ಹೊರ ಹೋಗಿಲ್ಲಾ ಹೋಗಿಬರುವೆ ಎಂದು ಅಮ್ಮನಿಗೆ ಹೇಳಿ ಹೊರ ಹೋದ ಮಗ ಯತಿರಾಜ,ಅವನು ಪ್ರತಿಬಾರಿ ಅವನ ಇಷ್ಟದ ರಸ್ತೆ bnglr to ಚಿಕ್ಕಬಳ್ಳಾಪುರ ಹೋಗಿ ಬರುವಾಗ ಅಡ್ಡ ಬಂದ ನಾಯಿ ರಕ್ಷಿಸಲು ಹೋಗಿ ರಸ್ತೆ ವಿಭಜಕ್ಕೆ ಹೊಡೆದು ಕಾರು ಪಕ್ಕದ ರಸ್ತೆಗೆಬಿದ್ದಿದೆ!ರಾಯರದಯೇ ಹಾಗು ನಿಮ್ಮ ಶುಭಹಾರೈಕೆ ಯತಿರಾಜನಿಗೆ ಸಣ್ಣ ಗಾಯವು ಇಲ್ಲ!🙏 pic.twitter.com/xtVf53Y9d4
— ನವರಸನಾಯಕ ಜಗ್ಗೇಶ್ (@Jaggesh2) July 1, 2021
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.