ಎಸ್.ವಿ. ರಾಜೇಂದ್ರಸಿಂಗ್ ಬಾಬು ನಿರ್ದೇಶನದ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ನಟನೆಯ ‘ರಾಜವೀರ ಮದಕರಿನಾಯಕ’ ಚಿತ್ರದ ಮುಹೂರ್ತ ಶುಕ್ರವಾರ ನೆರವೇರಿತು. ಡಿಸೆಂಬರ್ 2ರಂದು ಚಿತ್ರದುರ್ಗದಲ್ಲಿ ಈ ಸಿನಿಮಾದ ಸ್ಕ್ರಿಪ್ಟ್ ಪೂಜೆ ನೆರವೇರಿತ್ತು. ಈ ಮೊದಲು ಚಿತ್ರಕ್ಕೆ ‘ಗಂಡುಗಲಿ ಮದಕರಿನಾಯಕ’ ಎಂದು ಹೆಸರಿಡಲಾಗಿತ್ತು. ಈಗ ‘ರಾಜವೀರ ಮದಕರಿನಾಯಕ’ ಎಂದು ಬದಲಾಯಿಸಲಾಗಿದೆ.
ಬೆಂಗಳೂರಿನ ಗವಿಗಂಗಾಧರೇಶ್ವರ ದೇಗುಲದಲ್ಲಿ ಸಂಸದೆ ಹಾಗೂ ನಟಿ ಸುಮಲತಾ ಅಂಬರೀಷ್ ಮುಹೂರ್ತಕ್ಕೆ ಚಾಲನೆ ನೀಡಿದರು. ಜೊತೆಗೆ, ರಾಜಮಾತೆಯಾಗಿಯೂ ಅವರು ಕಾಣಿಸಿಕೊಳ್ಳಲಿದ್ದಾರಂತೆ. ಈ ಹಿಂದೆ ಅವರು ದರ್ಶನ್ ನಟಿಸಿದ್ದ ‘ಭೂಪತಿ’, ‘ವಿರಾಟ್’ ಮತ್ತು ‘ಅಂಬರೀಶ’ ಚಿತ್ರದಲ್ಲಿಯೂ ನಟಿಸಿದ್ದರು.
‘ಸಿನಿಮಾದಲ್ಲಿ ನಟಿಸುತ್ತಿರುವ ಎಲ್ಲರೂ ಹಿರಿಯ ಕಲಾವಿದರು. ಅವರು ಹೇಳಿದಂತೆ ನಾನು ಕೇಳಬೇಕು. ದೊಡ್ಡ ತಂಡ ಕಟ್ಟಿಕೊಂಡು ಈ ಚಿತ್ರ ನಿರ್ಮಿಸಲಾಗುತ್ತಿದೆ’ ಎಂದು ದರ್ಶನ್ ಖುಷಿ ಹಂಚಿಕೊಂಡರು.
ಬಿ.ಎಲ್. ವೇಣು ಅವರ ಕಾದಂಬರಿ ಆಧಾರಿತ ಕಥೆ ಚಿತ್ರ ಇದು. ಈ ಚಿತ್ರಕ್ಕಾಗಿ ಚಿತ್ರದುರ್ಗದ ಕೋಟೆಯ ಮರುಸೃಷ್ಟಿಗಾಗಿ ದೊಡ್ಡ ಸೆಟ್ ಹಾಕುವ ಸಿದ್ಧತೆಯಲ್ಲಿದೆ ಚಿತ್ರತಂಡ. ಜೊತೆಗೆ, ಹೈದರಾಬಾದ್, ರಾಜಸ್ಥಾನ ಮತ್ತು ಬೆಂಗಳೂರಿನಲ್ಲಿ ಶೂಟಿಂಗ್ ನಡೆಸಲು ಯೋಜಿಸಿದೆ. ರಾಕ್ಲೈನ್ ವೆಂಕಟೇಶ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಹಂಸಲೇಖ ಸಂಗೀತ ಸಂಯೋಜಿಸಿದ್ದಾರೆ.
ದರ್ಶನ್ ನಟಿಸಿದ್ದ ಐತಿಹಾಸಿಕ ಸಿನಿಮಾ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಮತ್ತು ‘ಮುನಿರತ್ನ ಪೌರಾಣಿಕ’ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಯಶಸ್ಸು ಕಂಡಿವೆ. ಹಾಗಾಗಿ, ಈ ಚಿತ್ರದ ಮೇಲೂ ನಿರೀಕ್ಷೆ ದುಪ್ಪಾಗಿದೆ.
ವಿಷ್ಣುವರ್ಧನ್ ನಟಿಸಬೇಕಿತ್ತು...
ಈ ಚಿತ್ರ ಮಾಡಬೇಕೆಂಬುದು ರಾಜೇಂದ್ರಸಿಂಗ್ ಬಾಬು ಅವರ ಹಲವು ವರ್ಷದ ಕನಸು. ಹಿಂದೆಯೇ ಅವರು ಚಿತ್ರಕಥೆ ಸಿದ್ಧಪಡಿಸಿಕೊಂಡಿದ್ದರಂತೆ. ‘ಮದಕರಿನಾಯಕ’ನಾಗಿ ಸಾಹಸಸಿಂಹ ವಿಷ್ಣುವರ್ಧನ್ ಅವರು ನಟಿಸಬೇಕಿತ್ತಂತೆ. ಆದರೆ, ಆರಂಭದಲ್ಲಿಯೇ ಈ ಚಿತ್ರ ನಿಂತುಹೋಯಿತು. ಈ ಚಿತ್ರಕ್ಕೆ ದೊಡ್ಡ ಬಜೆಟ್ ಮುಳುವಾಯಿತಂತೆ.
‘ಸಿನಿಮಾ ನಿರ್ಮಾಣ ಸಂಬಂಧ ಅಂದು ಪತ್ರಿಕೆಗಳಲ್ಲಿ ಜಾಹೀರಾತು ಕೂಡ ನೀಡಲಾಗಿತ್ತು. ಆ ಕಾಲಕ್ಕೆ ಸುಮಾರು ₹ 27 ರಿಂದ 30 ಕೋಟಿ ಬಜೆಟ್ ಬೇಡುತ್ತಿತ್ತು. ಹಾಗಾಗಿ, ಸಿನಿಮಾ ಸ್ಥಗಿತಗೊಂಡಿತು’ ಎನ್ನುವುದು ರಾಜೇಂದ್ರಸಿಂಗ್ ಬಾಬು ಅವರ ವಿವರಣೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.