ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಇಷ್ಟು ದಿನ ಕಳೆದರೂ ಎಲ್ಲರೂ ಇನ್ನೂ ಆಘಾತದಲ್ಲಿದ್ದೇವೆ. ಒಂದೆರಡು ಬಾರಿಯಷ್ಟೇ ನಾನು ಪುನೀತ್ ಅವರನ್ನು ಭೇಟಿಯಾಗಿದ್ದೆ. ನಾಲ್ಕು ವರ್ಷದ ಹಿಂದೆ ಇದೇ ಮನೆಯಲ್ಲಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೆ. ಆ ಸಂದರ್ಭದಲ್ಲಿ ಒಬ್ಬ ಸ್ಟಾರ್ ನಟನೊಂದಿಗೆ ಮಾತನಾಡುತ್ತಿದ್ದೇನೆ ಎಂದು ನನಗೆ ಅನಿಸಲೇ ಇಲ್ಲ. ಪಕ್ಕದ ಮನೆಯವರ ಜೊತೆ ಮಾತನಾಡಿದಂತೆ ಇತ್ತು. ಹೀಗಾಗಿದೆ ಎಂದು ಯೋಚಿಸಿದಾಗಲೇ ಹೃದಯ ಭಾರವಾಗುತ್ತದೆ. ಈ ನೋವನ್ನು ಮಾತಿನಲ್ಲಿ ವಿವರಿಸಲು ಸಾಧ್ಯವಿಲ್ಲ. ಪ್ರಸಕ್ತ ಸಮಾಜದಲ್ಲಿ ಒಬ್ಬರಿಗೆ ಸಹಾಯ ಮಾಡಿದರೆ ಇಡೀ ಜಗತ್ತಿಗೆ ತಿಳಿಯಬೇಕು ಎಂದು ನಾವು ಆಶಿಸುತ್ತೇವೆ. ಆದರೆ ಪುನೀತ್ ಅವರು ಈ ಬಗ್ಗೆ ಮೌನವಾಗಿದ್ದರು. ಅವರ ನಿಧನದ ಬಳಿಕವಷ್ಟೇ ಅವರ ಕೆಲಸ ಕಾರ್ಯಗಳು ಬೆಳಕಿಗೆ ಬಂದವು’ ಎಂದು ನೆನಪಿಸಿಕೊಂಡರು.