ಶುಕ್ರವಾರ ಬೆಂಗಳೂರಿನಲ್ಲಿ ವಿ.ರವಿಚಂದ್ರನ್ ನಟನೆಯ ದೃಶ್ಯ–2 ಭಾಗದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸುದೀಪ್, ‘ಮಾಣಿಕ್ಯ ಸಿನಿಮಾ ಚಿತ್ರೀಕರಣದ ವೇಳೆ, ‘ಮಲಯಾಳಂನಲ್ಲಿ ದೃಶ್ಯಂ ಸಿನಿಮಾ ಬಂದಿದೆಯಂತೆ. ಅದರ ಕಥೆ ಚೆನ್ನಾಗಿದೆ. ಒಮ್ಮೆ ನೋಡಿ’ ಎಂದು ರವಿಚಂದ್ರನ್ ಅವರಿಗೆ ಹೇಳಿದ್ದೆ. ರವಿಚಂದ್ರನ್ ಅವರು ನೋಡುತ್ತೇನೆ ಎಂದು ಹೇಳುತ್ತಲೇ ಹಲವು ದಿನ ದೂಡಿದ್ದರು. ಆದರೆ ನಾನು ಬಿಡಲಿಲ್ಲ. ಒತ್ತಾಯ ಪೂರ್ವಕವಾಗಿ ರಾಕ್ಲೈನ್ ಮಾಲ್ನಲ್ಲಿ ಅವರಿಗೆ ಈ ಸಿನಿಮಾ ತೋರಿಸುವ ವ್ಯವಸ್ಥೆ ಮಾಡಿದ್ದೆವು. ರವಿಚಂದ್ರನ್ ಅವರು ಅದನ್ನು ಮೆಚ್ಚಿಕೊಂಡರು. ‘ಈ ಥರ ಪಾತ್ರಗಳನ್ನು ನೀವು ಮಾಡಬೇಕು. ಇಷ್ಟವಾದರೆ ನಾನೇ ನಿರ್ಮಾಣ ಮಾಡುತ್ತೇನೆ’ ಎಂದು ಹೇಳಿದ್ದೆ. ಆ ಸಂದರ್ಭದಲ್ಲಿ ಇನ್ನೊಬ್ಬರು ಈ ಚಿತ್ರವನ್ನು ಮಾಡುತ್ತೇವೆ ಎಂದು ಕೇಳಿಕೊಂಡರು. ರವಿಚಂದ್ರನ್ ಅವರು ಆ ಪಾತ್ರವನ್ನು ಮಾಡುವುದಿದ್ದರಷ್ಟೇ ಒಪ್ಪಿಗೆ ನೀಡುತ್ತೇನೆ ಎಂದು ಷರತ್ತು ಹಾಕಿದ್ದೆ. ಆ ಮಾತಿಗೆ ತಕ್ಕಂತೆ ನಡೆದುಕೊಂಡರು’ ಎಂದು ಸುದೀಪ್ ನೆನಪಿಸಿಕೊಂಡರು.