ಬೆಂಗಳೂರು: ಅಭಿಮಾನಿಗಳ ಸಮ್ಮುಖದಲ್ಲಿ ಇದೇ 19ರಂದು ತಮ್ಮ 46ನೇ ಜನ್ಮದಿನ ಆಚರಣೆ ವೇಳೆ ಕತ್ತಿಯಲ್ಲಿ (ತಲ್ವಾರ್) ಕೇಕ್ ಕತ್ತರಿಸಿದ್ದ ನಟ ದುನಿಯಾ ವಿಜಯ್ ಗಿರಿನಗರ ಠಾಣೆಯಲ್ಲಿ ಮಂಗಳವಾರ ವಿಚಾರಣೆಗೆ ಹಾಜರಾದರು.
ಶಸ್ತ್ರಾಸ್ತ್ರಗಳ ಕಾಯ್ದೆ ಉಲ್ಲಂಘಿಸಿದ್ದಾರೆಂದು ವಿಜಯ್ ಅವರಿಗೆ ಗಿರಿನಗರ ಪೊಲೀಸರು ನೋಟಿಸ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ಠಾಣೆಗೆ ಬಂದ ಅವರು, ಸುಮಾರು ಎರಡು ಗಂಟೆಗಳು ಪೊಲೀಸರ ಎದುರು ವಿವರಣೆ ನೀಡಿದರು.
ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ವಿಜಯ್, 'ನನ್ನಿಂದ ತಪ್ಪಾಗಿದೆ. ಮತ್ತೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇನೆ. ಮತ್ತೆ ವಿಚಾರಣೆಗೆ ಹಾಜರಾಗುತ್ತೇನೆ’ ಎಂದರು.
‘ಜನ್ಮದಿನದ ಆಚರಣೆ ಸಂದರ್ಭದಲ್ಲಿ ತೊಂದರೆಯಾಗಿದೆ ಎಂದು ಅಕ್ಕಪಕ್ಕದವರು ದೂರಿದ್ದಾರೆ. ಇನ್ನು ಮುಂದೆ ಆ ರೀತಿ ಆಗದಂತೆಯೂ ನೋಡಿಕೊಳ್ಳುತ್ತೇನೆ’ ಎಂದರು.